ದಾವಣಗೆರೆ: ಪಂಚಮಸಾಲಿ ಪಾದಯಾತ್ರೆಗೆ ವಚನಾನಂದ ಸ್ವಾಮೀಜಿ ಬೆಂಬಲ ನೀಡಿದ್ದು, ಹರಪನಹಳ್ಳಿಯಲ್ಲಿ ಸಮಾವೇಶದಲ್ಲಿ ಕೂಡಲ ಸಂಗಮ , ಹರಿಹರ ಪೀಠಗಳ ಸಮಾಗಮವಾಗಿದೆ.
ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪ್ರಕಟಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇವೆ. ಮೀಸಲಾತಿ ಪ್ರಕಟಿಸದಿದ್ದರೆ ಇದೇ 29 ರಂದು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ನಮ್ಮವರು ಎಂಬ ಕಾರಣಕ್ಕಾಗಿ ಈ ಹಿಂದೆ ಉಪವಾಸ ಸತ್ಯಾಗ್ರಹವನ್ನ ಹಿಂದೆ ಪಡೆದಿದ್ದೆ. ಆದರೆ ಈಗ ನನ್ನ ಪಾದಯಾತ್ರೆ ನಿಲ್ಲಿಸಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಒಬ್ಬ ವ್ಯಕ್ತಿ ಹುತಾತ್ಮರಾಗಿದ್ದಾರೆ. ಮೀಸಲಾತಿ ಸಿಗುವ ತನಕ ಹೋರಾಟ ನಿರಂತರ ನಡೆಯಲಿದೆ. ನಮ್ಮ ಪಾದಯಾತ್ರೆ ಹರಪನಹಳ್ಳಿಯಿಂದ ದಾವಣಗೆರೆ ತಲುಪುವುದರೊಳಗೆ ಸಿಎಂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪ್ರಕಟಿಸಲಿ ಎಂದು ಹರಪನಹಳ್ಳಿ ಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಂತರ ಮಾತನಾಡಿದ ವಚನಾನಂದ ಸ್ವಾಮೀಜಿ, ಹರಿಹರ ಹಾಗೂ ಕೂಡಲ ಸಂಗಮ ಪಂಚಮಸಾಲಿ ಗುರುಪೀಠಗಳು ಒಂದಾಗಿವೆ. ಇಡೀ ಪಂಚಮಸಾಲಿ ಸಮಾಜಕ್ಕೆ ಎರಡು ಪೀಠಗಳು ಎರಡು ಕಣ್ಣುಗಳಿದ್ದ ಹಾಗೆ. ಇದರಲ್ಲಿ ಯಾರೂ ತಮ್ಮ ಬೇಳೆ ಬೆಳೆಸಿಕೊಳ್ಳುವುದು ಬೇಡ. ನಾನು ಮತ್ತು ಜಯಮೃತ್ಯುಂಜಯ ಸ್ವಾಮೀಜಿ 21 ವರ್ಷದಿಂದ ಸ್ನೇಹಿತರು. ನಾನು ನೇರವಾಗಿ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಹೇಳುವೆ.ನಾವು ಒಂದಾಗಿದ್ದೇವೆ, ಯಾರ ಮಾತನ್ನೂ ಕೇಳುವುದು ಬೇಡ ಎಂದಿದ್ದಾರೆ.



