ಕೋಲಾರ: ಅಬಕಾರಿ ಸಚಿವ ಎಚ್.ನಾಗೇಶ್ ಅವರು ಅಧಿಕಾರಿಗಳ ವರ್ಗಾವಣೆಯಲ್ಲಿ ಒಂದು ಕೋಟಿ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟದ್ದ ಆರೋಪ ಕೇಳಿಬಂದಿದೆ. ಈ ಕುರಿತು ಲೋಕಾಯುಕ್ತ ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿರುವ ಪತ್ರ ಬಹಿರಂಗವಾಗಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಆಧಾರ ರಹಿತ ಆರೋಪ ಕೇಳಿ ಬಂದಿದೆ. ನನ್ನ ಮೇಲೆ ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ. ಅವರ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಿದ್ದಾರೆ.
ಮೋಹನ್ ಕುಮಾರ್ ಹಾಗೂ ಅವರ ಪುತ್ರಿ ಸ್ನೇಹ ಎಂಬುವವರು ಇಂಹದೊಂದು ಆರೋಪ ಮಾಡಿದ್ದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿದ ಸಚಿವರು, ಅಬಕಾರಿ ಇಲಾಖೆಯಲ್ಲಿ ಮೋಹನ್ ಕುಮಾರ್ ಭ್ರಷ್ಟಾಚಾರಿಯಾಗಿದ್ದಾರೆ. ದುರುದ್ದೇಶದಿಂದ ನನ್ನ ಮೇಲೆ ಮೋಹನ್ ಕುಮಾರ್ ಪುತ್ರಿ ಸ್ನೇಹ ಆರೋಪ ಮಾಡುತ್ತಿದ್ದಾರೆ. ನಾನು ಎಸ್ಸಿ ಸಮುದಾಯವನು ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡುತ್ತಿದ್ದಾರೆ. ನನ್ನನ್ನ ಹೆದರಿಸಲು, ಬ್ಲಾಕ್ ಮೇಲ್ ಮಾಡಲು ಪ್ರಯತ್ನ ನಡೆಯುತ್ತಿವೆ ಎಂದಿದ್ದಾರೆ.
ಇನ್ನು ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಅಧಿಕಾರಿ ಮೋಹನ್ ಕುಮಾರ್ ಮೆಂಟಲ್ ಇಂಬ್ಯಾಲೆನ್ಸ್ ಇದ್ದಾರೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ನಾನು ಭ್ರಷ್ಟಾಚಾರಿ ಅಲ್ಲ. ನಾನು ಯಾವುದೇ ಲಂಚ ತೆಗೆದುಕೊಂಡಿಲ್ಲ. ನಾನು ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ. ಧರ್ಮಸ್ಥಳ ಇರಬಹುದು ಅಥವಾ ಬೇರೆ ಯಾವುದೇ ದೇವಸ್ಥಾನ ಇರಬಹುದು. ಅಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮುಳುಬಾಗಿಲು ತಾಲೂಕಿನಲ್ಲಿ ಸಚಿವರು 2 ತಿಂಗಳಿಗೊಮ್ಮೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾರೆ. ಲಂಚ ಕೊಟ್ಟರೆ ಮಾತ್ರ ಆ ಸ್ಥಾನದಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಾರೆ. ಇಲ್ಲವಾದರೆ ಆ ಅಧಿಕಾರಿಯನ್ನು ವರ್ಗ ಮಾಡುವಂತೆ ತಮ್ಮ ಲೆಟರ್ ಹೆಡ್ನಲ್ಲಿ ಸೂಚಿಸುತ್ತಾರೆ. ಅವರ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆರ್ಟಿಐ ಕಾರ್ಯಕರ್ತ ಮಂಡಿಕಲ್ ನಾಗರಾಜ್ ಎಂಬುವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ನನ್ನ ತಂದೆಯನ್ನು ಬೆಂಗಳೂರು ಅಬಕಾರಿ ವಿಭಾಗಕ್ಕೆ ವರ್ಗಾವಣೆ ಮಾಡಲು ಎಚ್.ನಾಗೇಶ್ 1 ಕೋಟಿ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಸ್ನೇಹಾ ಎಂಬುವರು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಬರೆದಿರುವ ಪತ್ರವೂ ಬಹಿರಂಗವಾಗಿದೆ. ಪ್ರಸ್ತುತ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ತಂದೆಗೆ ರಕ್ತದೊತ್ತಡ ಡಯಾಬಿಟೀಸ್, ಕಿಡ್ನಿ ಸಮಸ್ಯೆ ಇದೆ. ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ.
ಬೆಂಗಳೂರಿನಲ್ಲಿ ಖಾಲಿ ಇರುವ 2 ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಕೋರಲಾಗಿತ್ತು. ಈ ವೇಳೆ ಅಬಕಾರಿ ಸಚಿವರು ಮಧ್ಯವರ್ತಿ ಮೂಲಕ 1 ಕೋಟಿ ರೂ. ಕಳುಹಿಸುವಂತೆ ಸೂಚಿಸಿದ್ದರು. ಈ ಕುರಿತು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಾಜ್ಯದ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಪತ್ರದಲ್ಲಿ ವಿವರಿಸಿದ್ದಾರೆ. 2020ರ ಜು.14ರಂದು ಸಲ್ಲಿಸಿರುವ ದೂರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



