ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ(ಡಿ.10) ನವದೆಹಲಿಯಲ್ಲಿ ನೂತನ ಸಂಸತ್ ಭವನದ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಜನತೆಯ ಸಂಸತ್ ನಿರ್ಮಾಣ ಮಾಡುವ ಐತಿಹಾಸಿಕ ಅವಕಾಶವಾಗಿದೆ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ‘ನವ ಭಾರತ’ದ ಆಶೋತ್ತರಗಳು ಮತ್ತು ಅಗತ್ಯಗಳನ್ನು ಪೂರೈಸಲು ಈ ಭವನ ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ತಿಳಿಸಿದೆ.
ನೂತನ ಸಂಸತ್ ಭವನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಾಮಕಾರಿ ಇಂಧನ ವ್ಯವಸ್ಥೆ, ತಡೆರಹಿತ ಭದ್ರತಾ ಸೌಲಭ್ಯಗಳು ಒಳಗೊಂಡಿರಲಿದ್ದು, ಈ ಕಟ್ಟಡ ಹಾಲಿ ಸಂಸತ್ ಭವನಕ್ಕೆ ಹೊಂದಿಕೊಂಡಂತೆ ತ್ರಿಕೊನಾಕಾರದ ವಿನ್ಯಾಸದಲ್ಲಿ ನಿರ್ಮಾಣವಾಗಲಿದೆ.
ಲೋಕಸಭೆಯ ಒಳಾಂಗಣ ಪ್ರದೇಶ ಹಾಲಿ ಇರುವುದಕ್ಕಿಂತ ಮೂರು ಪಟ್ಟು ಹೆಚ್ಚಾಗಲಿದೆ ಮತ್ತು ರಾಜ್ಯಸಭೆಯ ವಿಸ್ತ್ರೀರ್ಣ ಗಣನೀಯವಾಗಿ ಹೆಚ್ಚಾಗಲಿದೆ. ಹೊಸ ಭವನ ಒಳಾಂಗಣ ವಿನ್ಯಾಸದಲ್ಲಿ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪ್ರಾದೇಶಿಕ ಕಲೆ, ಕರಕುಶಲಕಲೆ, ಜವಳಿ ಮತ್ತು ವಾಸ್ತುಶಿಲ್ಪ ಸೇರಿದಂತೆ ವೈವಿಧ್ಯತೆಯ ಸಮ್ಮಿಶ್ರಣವಾಗಿರಲಿದೆ. ಇದರ ವಿನ್ಯಾಸದಲ್ಲಿ ಅದ್ಭುತ ಕೇಂದ್ರೀಯ ಸಂವಿಧಾನ ಗ್ಯಾಲರಿಗೆ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಸಾರ್ವಜನಿಕರ ಭೇಟಿ ನೀಡಲು ಅವಕಾಶವಿರಲಿದೆ.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ವೆಂಕಟೇಶ್ ಜೋಶಿ, ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವಹರ್ ದೀಪ್ ಸಿಂಗ್ ಪುರಿ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಮತ್ತಿತರರು ಭಾಗವಹಿಸಲಿದ್ದಾರೆ. ಕೇಂದ್ರ ಸಂಪುಟ ಸಚಿವರು, ರಾಜ್ಯ ಸಚಿವರು, ಸಂಸದರು, ಕಾರ್ಯದರ್ಶಿಗಳು, ರಾಯಭಾರಿಗಳು, ಹೈಕಮಿಷನರ್ ಗಳು ಸೇರಿದಂತೆ ಸುಮಾರು 200 ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಕಾರ್ಯಕ್ರಮವನ್ನು ನೇರ ವೆಬ್ ಕಾಸ್ಟ್ ಮಾಡಲಾಗುತ್ತದೆ.



