ವಿಜಯಪುರ : ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ಯಾರೂ ನಕಲಿ ಕನ್ನಡ ಪರ ಸಂಘಟನೆಗಳಿಗೆ ಹೆದರಬೇಡಿ. ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಫಲಗೊಳಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜನರಿಗೆ ಕರೆ ನೀಡಿದರು.
ಡಿ. 5 ರ ಕರ್ನಾಟಕ ಬಂದ್ ವಿರೋಧಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಬೆಂಬಲವಾಗಿ ಈ ಸಭೆ ನಡೆಸಲಾಗುತ್ತಿದೆ. ಇಂದು ಹಿಂದೂ ಸಮಾಜವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಡೆಯುತ್ತಿದೆ. ಸವರ್ಣಿಯರು-ದಲಿತರು, ಕನ್ನಡಿಗರು,-ಮರಾಠಿಗರನ್ನು, ಮಂಗಳೂರಿನಲ್ಲಿ ಮಾರವಾಡಿಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಕನ್ನಡ ಪರ ಹೋರಾಟಗಾರರಲ್ಲಿ ಕೆಲವರಿಗೆ ಕನ್ನಡವೇ ಬರಲ್ಲ. ಈಗ ಮೊದಲ ಹಂತದಲ್ಲಿ ನಮ್ಮ ಬೆಂಬಲಿಗರು ಈ ಸಂಘಟನೆಗಳ ವಿರುದ್ಧ ಜನಜಾಗೃತಿ ಮಾಡುತ್ತಿದ್ದಾರೆ. ಎರಡು ಮತ್ತು ಮೂರನೇ ಹಂತ ಮಾಡಿದರೆ ನಕಲಿ ಹೋರಾಟಗಾರರು ನೇಣು ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯ ಮಾಡಿದರು.
ಕರ್ನಾಟಕದ ಜನತೆ ಈ ಬಂದ್ ವಿಫಲ ಮಾಡಿ, ನಮ್ಮ ಶಕ್ತಿ ತೋರಿಸುವ ಮೂಲಕ ನಕಲಿ ಹೋರಾಟಗಾರರಿಗೆ ಬುದ್ದಿ ಕಲಿಸಬೇಕಿದೆ. ಮರಾಠ ಸಮಾಜವನ್ನು ಮರಾಠಿ ಶಬ್ದದ ಮೂಲಕ ಒಡೆಯುವ ಕುತಂತ್ರ ರಾಜ್ಯದಲ್ಲಿ ನಡೆದಿದೆ. ಮಂಗಳೂರ – ಉಡುಪಿಯಲ್ಲಿ ಮಾರವಾಡಿಗಳನ್ನು ವ್ಯಾಪಾರ ಮಾಡದಂತೆ ಹೊರ ಹಾಕುವ ದೇಶ ವಿರೋದಿ ಮತ್ತು ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ದೇಶದಲ್ಲಿ ನಡೆದಿದೆ. ಬರಿ ಹೊಂದಾಣಿಕೆ ರಾಜಕಾರಣ ಮಾಡುತ್ತ ಹೋದರೆ ಅಯೋಗ್ಯರಿಗೆ ಅವಕಾಶ ನೀಡಿದಂತಾಗುತ್ತೆ. ನನ್ನ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಇವರು ಬಳಸಿರುವ ಕನ್ನಡವನ್ನು ನೋಡಿದರೆ ಇವರು ಕನ್ನಡಿಗರಿಗೆ ಹುಟ್ಟಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ. ಎಂದರು.
ಬೆಂಗಳೂರಿನಲ್ಲಿ ಮಾಮೂಲಿ ಫಿಕ್ಸ್ ಮಾಡಿಕೊಂಡು, ಐಷಾರಾಮಿ ಬಂಗಲೇ, ಕಾರುಗಳಲ್ಲಿ ದುಡಿಯದೇ ಜೀವನ ಸಾಗಿತ್ತಾರೆ. ನನಗೆ ಅವಕಾಶ ಸಿಕ್ಕರೆ ನಕಲಿ ಕನ್ನಡ ಪರ ಸಂಘಟನೆಗಳನ್ನು ಬಂದ್ ಮಾಡಿಸುತ್ತೇನೆ. ನಿಜವಾದ ಕನ್ನಡ ಸಂಘಟನೆಗಳಿಗೆ ಅನುದಾನ ಕೊಡುವ ವ್ವವಸ್ಥೆ ಮಾಡುತ್ತೇನೆ ಎಂದು ಕಿಡಿಕಾರಿದರು.
ಕನ್ನಡ ಪರ ಹೋರಾಟಗಾರರು. ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳುತ್ತಾರೆ. ಆದರೆ, ಬಹಳಷ್ಟು ಜನರಿಗೆ ಬುದ್ಧಿ ಭ್ರಮಣೆ ಮಾಡುವ ಶಕ್ತಿ ನನಗಿದೆ. ಕನ್ನಡದ ಹೋರಾಟಕ್ಕಾಗಿ ವಾಟಾಳ್ 2 ಕೋಟಿ ರೂ ಕೇಳಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ 5 ರಿಂದ 10 ಮತ ಪಡೆದು ವಾಟಾಳ ನನ್ನ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಡಿ. 5ರ ನಂತರ ವಾಟಾಳ್ ಕೂಡ ಮೂಲೆ ಗುಂಪಾಗುತ್ತಾರೆ ಎಂದರು.



