ದಾವಣಗೆರೆ: ವೀರಶೈವ-ಲಿಂಗಾಯ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ ಆಧುನಿಕ ಬಸವಣ್ಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.
ಸಿಎಂ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿದ್ದಾರೆ. ನಿಗಮಕ್ಕೆ ಕೊಟ್ಟಿದ್ದು ತಪ್ಪೇನಿಲ್ಲ. ಅಂದು ಬಸವಣ್ಣನವರು ಸಾಮಾಜಿಕ ನ್ಯಾಯ ಕೊಟ್ಟಿದ್ದರು. ಅದೇ ರೀತಿ ಇಂದು ಯಡಿಯೂರಪ್ಪ ಅವರು ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಆಧುನಿಕ ಬಸವಣ್ಣ ಎಂದರು.

ಪಕ್ಷದಲ್ಲಿ ಎರಡು ಮೂರು ಬಾರಿ ಗೆದ್ದವರಿಗೆ ಸಚಿವಸ್ಥಾನದ ಅವಕಾಶ ಕೊಡಿ. ಗೆದ್ದವರಿಗೆ ಮಾತ್ರ ಅವಕಾಶ ಕೊಡಿ ಎಂದು ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಅವರಿಗೆ ಕೇಳಿದ್ದೇವೆ. ಸೋತ ವ್ಯಕ್ತಿಯಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಶಾಸಕರ ಬೆಂಬಲದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ದೊಂಬರಾಟದ ವಾಟಾಳ್ ನಾಗರಾಜ್ ನಿನಗೆ ತಾಕತ್ತಿದ್ದರೆ, ಈ ರಾಜ್ಯ ಬಂದ್ ಮಾಡು ನೋಡೋಣ. ಸಿಎಂ ಬಗ್ಗೆ ಕೇವಲವಾಗಿ ಮಾತಾಡಿದರೇ ಹುಷಾರ್…! ನಾವು ಬಂದ್ ಯಶಸ್ವಿ ಆಗದಂತೆ ನೋಡಿಕೊಳ್ಳುತ್ತೇವೆ. ನಿನಗೆ ತಾಕತ್ತು ಇದ್ದರೆ ಬಂದ್ ಮಾಡು ನೋಡಣ ಎಂದ ಅವರು, ವಾಟಾಳ್ ಬುಟಾಟಿಕೆ ವ್ಯಕ್ತಿ. ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮ ವಾಗಿ ವಶ ಪಡಿಸಿಕೊಂಡಿದ್ದಾರೆ. ಇವರ ಜಮೀನಿನಲ್ಲಿ ಕೆಲ್ಸಾ ಮಾಡುತ್ತಿರುವುದು ತಮಿಳರು. ಬೆಂಗಳೂರಿನಲ್ಲಿ ಎಷ್ಟು ಸೈಟ್ ಇವೆ ಎಂಬ ಬಗ್ಗೆ ನನ್ನ ಕಡೆ ದಾಖಲೆಗಳಿವೆ ಎಂದು ಕಿಡಿಕಾರಿದರು.
ಕೇಂದ್ರ ಮಾಜಿ ಸಚಿವ, ಶಾಸಕರು ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂಗೆ ಡೆಡ್ ಲೈನ್ ಕೊಡುವುದು ಸರಿಯಲ್ಲ. ನಮ್ಮ ಪಕ್ಷದ ಮುಖಂಡರನ್ನು ಗೌರವಿಸಬೇಕು. ಹಾದಿ, ಬೀದಿಲಿ ನಿಂತು ಮಾತನಾಡುವುದರಿಂದ ಪಕ್ಷದ ಗೌರವ ಕಡಿಮೆಯಾಗುವುದಿಲ್ಲ. ಯಾರು ಮಾತನಾಡುತ್ತಾರೋ ಅವರ ವರ್ಚಸ್ಸು ಕಡಿಮೆಯಾಗುತ್ತೆ. ಇದು ಪಕ್ಷಕ್ಕೆ ಶೋಭೆ ತರುವ ವಿಚಾರವಲ್ಲ. ಬಸ್ ನಲ್ಲಿ ಟವಲ್ ಹಾಕಿ ಅಭ್ಯಾಸ. ಇಲ್ಲಿ ಸೀಟ್ ಖಾಲಿ ಇಲ್ಲ. ಮುಖ್ಯಮಂತ್ರಿ ಗಳ ಕುರ್ಚಿ ಕೂಡ ಖಾಲಿ ಇಲ್ಲ ಎಂದರು.



