ದಾವಣಗೆರೆ: ರಾಜ್ಯ ಸರ್ಕಾರ ಮರಾಠ ಭಾಷೆಗೆ ನಿಗಮ ರಚಿಸಿಲ್ಲ. ಮರಾಠಿ ಜನಾಂಗದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮರಾಠ ಸಮುದಾಯ ಹಿಂದುಳಿದಿದೆ. ರಾಜ್ಯದಲ್ಲಿ 40 ಲಕ್ಷ ಸಮುದಾಯವರಿದ್ದಾರೆ. ಇವರ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಗಮ ರಚಿಸಿದ್ದಾರೆ. ಇದಕ್ಕಾಗಿ ಸಮಾಜ ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇವೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿನ ಮರಾಠಿಗರು ಕನ್ನಡಿಗರೇ ಆಗಿದ್ದಾರೆ. ಅವರ ಮನೆ ಮಾತು ಕನ್ನಡ. 500 ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಇಲ್ಲಿಗೆ ಬಂದಿದ್ದಾರೆ. ಗವೀಪುರಂನಲ್ಲಿರುವ ಗೋಸಾಯಿ ಮಠ ಮರಾಠರಿಗೆ ಪೂಜ್ಯನೀಯ ಸ್ಥಳ ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ರಾಜ್ಯದ ಮರಾಠ ಸಮುದಾಯ ಖಂಡಿಸಿದೆ. ಎಂಇಎಸ್ ಕಾರಣಕ್ಕೆ ಪ್ರಾಧಿಕಾರ ರಚನೆ ವಿರೋಧಿಸುವುದು ಸರಿಯಲ್ಲ. ಅಲ್ಪಸಂಖ್ಯಾತರಿಗೆ ಪ್ರವಾಸ ಭಾಗ್ಯ, ಶಾದಿ ಭಾಗ್ಯ ನೀಡಿ ಸಮುದಾಯದಲ್ಲಿ ತಾರತಮ್ಯ ಮಾಡುವ ಸಿದ್ದರಾಮಯ್ಯ ಅವರಿಗೆ ಮರಾಠರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಹಿಂದುಳಿದವರನ್ನು ಮೇಲೆತ್ತಲು ಎಲ್ಲರೂ ಸಹಕಾರ ನೀಡಿ ಬಂದ್ ಕೈಬಿಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಗೋಪಾಲರಾವ್ ಮಾನೆ, ಸೋಮಶೇಖರ್ ಪವಾರ್, ಪರಶುರಾಮ್ ಸಾಳುಂಕೆ, ಮಂಜುನಾಥ ರಾವ್ ಕಾಠೆ ಇದ್ದರು.



