ಚಿತ್ರದುರ್ಗ: ರಾಜ್ಯ ಸರ್ಕಾರ ಸ್ಥಾಪಿಸಿರುವ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಹೆಸರು ಬದಲಿಸಿ ಬಸವೇಶ್ವರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ತರಳಬಾಳು ಶಾಖಾ ಮಠ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಶ್ರೀಗಳು, ಎಲ್ಲರಿಗೂ ಗೊತ್ತಿರುವ ಹಾಗೆ ಲಿಂಗಾಯತ-ವೀರಶೈವ ಎನ್ನುವಲ್ಲೇ ವಿವಾದವಿದೆ. ಅದುದರಿಂದ ದೇವರಾಜ ಅರಸ್ ಅಭಿವೃದ್ಧಿ ನಿಗಮ, ಅಂಬೇಡ್ಕರ್ ನಿಗಮದಂತೆ ಬಸವೇಶ್ವರ ಅಭಿವೃದ್ಧಿನಿಗಮವೆಂದು ವೀರಶೈವ ಲಿಂಗಾಯ ಅಭಿವೃದ್ಧಿ ನಿಗಮದ ಹೆಸರನ್ನು ಬದಲಿಸಬೇಕು. ಇದಕ್ಕೆ ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಜನ ಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು. ಮಹಾರಾಷ್ಟ್ರದಲ್ಲಿ ಮರಾಠರಿಗೆ 16 ರಷ್ಟು ಮೀಸಲಾತಿ ನೀಡುವಂತೆ ರಾಜ್ಯದಲ್ಲಿ ಶೇ. 16 ರಷ್ಟಿರುವ ಲಿಂಗಾಯತರಿಗೆ ಶೇ. 16 ರಷ್ಟು ಹಣ ಮೀಸಲಿಡಬೇಕು. ಕೇಂದ್ರದ ಒಬಿಸಿ ಪಟ್ಟಿಗೆ ಲಿಂಗಾಯತರನ್ನು ಸೇರಿಸಬೇಕು. ಈ ಹಿಂದೆ ಇದ್ದ 2 ಎ ಸೌಲಭ್ಯ ಈಗ ಇಲ್ಲ. ಹಿಂದಿನಂತೆ ಮುಂದುವರಿಸಬೇಕು. ಲಿಂಗಾಯತ ಸ್ವತಂತ್ರ ಧರ್ಮ ಎಂದು ಅಂಗೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಶೈಕ್ಷಣಿಕ, ಸಾಮಾಜಿಕ, ಅರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ನಿಗಮಗಳ ಅಗತ್ಯವಿದೆ. ಅದು ಸರ್ಕಾರದ ಜವಾಬ್ದಾರಿಯೂ ಹೌದು. ನಿಗಮಗಳು ಚುನಾವಣೆಯ ತಂತ್ರವಾಗಬಾರದು. ಒಂದು ಪಕ್ಷದ ಸರ್ಕಾರದಲ್ಲಿ ಸಿಕ್ಕ ಸಹಾಯ, ಮತ್ತೊಂದು ಪಕ್ಷ ಸರ್ಕಾರ ಬಂದಾಗ ಸಿಗದಿರಬಹುದು. ಸಂತ್ರಸ್ತ ಸಮುದಾಯಗಳಿಗೆ ಆದ್ಯತೆ ನೀಡಬೇಕು. ಈಗ ಎಲ್ಲ ಜನಾಂಗದವರೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.



