ಡಿವಿಜಿ ಸುದ್ದಿ, ಮಂಡ್ಯ: ಕೆಆರ್ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಭದ್ರ ಕೋಟೆಗೆ ಲಗ್ಗೆ ಇಟ್ಟಿದ್ದ ಬಿಜೆಪಿ, ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಅಧಿಕಾರಕ್ಕೇರಿದೆ.
ಸಚಿವ ನಾರಾಯಣ ಗೌಡ ಇದೀಗ ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಒಂದೇ ಕಲ್ಲಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಹೊಡೆದ ನೀಡಿದ್ದಾರೆ. ಈ ಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಗೆ ನಾರಾಯಣಗೌಡ ಮತ್ತೊಂದು ಮೆಟ್ಟಿಲು ಹಾಕಿದ್ದಾರೆ.

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಇಲ್ಲಿವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕಾರ ನಡೆಸಿದ್ದವು. ಆದರೆ, ಕೆಆರ್ಪೇಟೆ ಉಪ ಚುನಾವಣೆಯಲ್ಲಿ ಮಂಡ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದಾರೆ. ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಶಾಕ್ ನೀಡಿದ್ದಾರೆ.
ಕೆಆರ್ಪೇಟೆ ಪುರಸಭೆಯಲ್ಲಿ ಬಿಜೆಪಿಯಿಂದ ಓರ್ವ ಅಭ್ಯರ್ಥಿ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ 14 ಮಂದಿಯನ್ನು ಸೆಳೆದುಕೊಂಡು ತಮ್ಮ ಬೆಂಬಲಿಗ ಅಭ್ಯರ್ಥಿಯನ್ನು ಗೆಲ್ಲಿಸಕೊಳ್ಳುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಮರ್ಮಾಘಾತ ನೀಡಿದ್ದಾರೆ. ಸದ್ಯ ಪುರಸಭೆಯ ಅಧ್ಯಕ್ಷೆಯಾಗಿರುವ ಮಾದೇವಿ ಜೆಡಿಎಸ್ ಪಕ್ಷದಿಂದ 15ನೇ ವಾರ್ಡ್ನಲ್ಲಿ ಗೆಲುವು ಸಾಧಿಸಿದ್ದರು. ಆದರೆ ಇವರು ನಾರಾಯಣ ಗೌಡ ಬೆಂಬಲಿಗರು ಆಗಿರುವ ಕಾರಣ ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
ಚುನಾವಣೆಯಲ್ಲಿ ಪುರಸಭೆಯ ಅಧ್ಯಕ್ಷ ಮೀಸಲಾತಿ ಎಸ್ಟಿ ಜನಾಂಗಕ್ಕೆ ಲಭಿಸಿತ್ತು. ಹೀಗಾಗಿ ಅನಿವಾರ್ಯವಾಗಿ ಜೆಡಿಎಸ್ ಪಕ್ಷದವರು ನಾರಾಯಣಗೌಡ ಪರ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಕೆಆರ್ಪೇಟೆ ಪುರಸಭೆ 23 ವಾರ್ಡ್ ಹೊಂದಿದ್ದು, ಈ ಪೈಕಿ ಜೆಡಿಎಸ್ 11, ಕಾಂಗ್ರೆಸ್ 10, ಬಿಜೆಪಿ 1 ಹಾಗೂ ಪಕ್ಷೇತರ 1 ಇತ್ತು. ಹೀಗಿದ್ದರು ಸಹ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಪಡೆಯಲು ಸಾಧ್ಯವಾಗದೇ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾದೇವಿ ಅಧ್ಯಕ್ಷರಾಗಿದ್ದು, ಜೆಡಿಎಸ್ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನ ಹಿಡಿದಿದ್ದಾರೆ.



