ಡಿವಿಜಿ ಸುದ್ದಿ, ಬೆಂಗಳೂರು: ಹೆಲ್ಮೆಟ್ ಧರಿಸದ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ಮೂರು ತಿಂಗಳು ಅಮಾನತು ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿದ ಬೆನ್ನಲ್ಲೇ ಆರ್ ಟಿಒ ಇಲಾಖೆ ಅಧಿಕಾರಿಗಳು ಫೀಲ್ಡಿಗಿಳಿದು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಿದ್ದರು. ಇದಾದ ಬಳಿಕ ಮಾಸ್ಕ್ ಹಾಕದಿದ್ದರೆ ದಂಡ ಹಾಕಲಾಗಿತ್ತು. ಈಗ ರಸ್ತೆ ಮತ್ತು ಸಾರಿಗೆ ಇಲಾಖೆ(ಆರ್ಟಿಒ) ಅಧಿಕಾರಿಗಳು ವಾಹನಗಳನ್ನು ಅಡ್ಡಗಟ್ಟಿ ದಂಡ ಹಾಕುತ್ತಿದ್ದಾರೆ.ನಂಬರ್ ಪ್ಲೇಟ್ , ಅಂತರ್ ರಾಜ್ಯ ತೆರಿಗೆ, ಲಗೇಜ್ ಸರಿಯಾಗಿಲ್ಲ, ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದವರಿಗೆ ದಂಡ ಹಾಕಲಾಗುತ್ತಿದೆ. ಅಷ್ಟೇ ಅಲ್ಲದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ದರೆ ಅವರ ಡಿಎಲ್ ಸಹ ರದ್ದಾಗಲಿದೆ.

ನಗರದ ಟಿನ್ ಫ್ಯಾಕ್ಟರಿ ಸಮೀಪ, ಗೊರಗುಂಟೆಪಾಳ್ಯ, ಫೋರಂ ಮಾಲ್, ಸುಮನಹಳ್ಳಿ ಜಂಕ್ಷನ್, ಕನಕಪುರ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಭಟ್ಟರಹಳ್ಳಿ, ಚಂದಾಪುರ ಸರ್ಕಲ್, ದೇವನಹಳ್ಳಿ ಸೇರಿ 21 ಪ್ರಮುಖ ಜಂಕ್ಷನ್ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.

ವಾಹನಗಳನ್ನು ತಡೆದು ತಪಾಸಣೆ ಮಾಡಲು ಸಾರಿಗೆ ಇಲಾಖೆಗೆ ಮೊದಲೇ ಅಧಿಕಾರ ಇತ್ತು. ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಸದ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಸಾರಿಗೆ ಇಲಾಖೆಯ ನಗರ ವಿಭಾಗದ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ತಿಳಿಸಿದ್ದಾರೆ.



