ಡಿವಿಜಿಸುದ್ದಿ. ಕಾಂ, ಚನ್ನಗಿರಿ: ನಾವು ಚಿಕ್ಕವರಿದ್ದಾಗ ನಮ್ಮನ್ನು ಹೆತ್ತು-ಹೊತ್ತು ಸಲಹಿದ ತಂದೆ – ತಾಯಿಯನ್ನು ವೃದ್ಧಾಪ್ಯದಲ್ಲಿ ಚನ್ನಾಗಿ ನೋಡಿಕೊಳ್ಳುವ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದು ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಎನ್ . ಕುಮಾರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಾಪಟ್ಟಣದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಮತ್ತು ಉಪನ್ಯಾಸಕರು ಬಸವಪಟ್ಟಣ ಗ್ರಾಮದಲ್ಲಿರುವ ಸಿದ್ಧಾರೂಢ ವೃದ್ಧಾಶ್ರಮದ ಸುತ್ತಲೂ ಸ್ವಚ್ಛತಾ ಕಾರ್ಯ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅಣು ಕುಟುಂಬ ಪದ್ಧತಿಯಿಂದ ನಮ್ಮ ಪಾರಂಪರಿಕ ಕೌಟುಂಬಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ವೃದ್ಧಾಶ್ರಮ ಕೇಂದ್ರಗಳು ಹಿರಿಯರ ಸೇವೆ ಮಾಡುತ್ತಿರುವುದು ಅತ್ಯಂತ ಪ್ರಶಂಸಾರ್ಹ ಕಾರ್ಯವಾಗಿದೆ ಎಂದರು.
ಹಿರಿಯರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು. ತಾಯವ್ವನ ಬೈಬೇಡ ತಿಳಿಗೇಡಿ ನನ ತಮ್ಮ ಬಾಳ ದಿನದಾಕಿ ಹಡೆದವ್ವಗ ಬೈದಾರ ಬಾಳ ಮರುಗ್ಯಾಳ ಮನದಾಗ ಎಂಬ ಜನಪದ ಗೀತೆಯ ಆಶಯದಂತೆ ಗುರು ಹಿರಿಯರನ್ನು ಗೌರವದಿಂದ ಕಾಣಬೇಕಿದೆ ಎಂದು ತಿಳಿಸಿದರು.

ಹನುಮಂತಪ್ಪ ಟಿ ಮಾತನಾಡಿ, ಮಾನವ ಆಧುನಿಕವಾಗುತ್ತಾ ಹೋದಂತೆ ಮಾನವೀಯ ಮೌಲ್ಯ, ಸಂಬಂಧಗಳಿಂದ ದೂರವಾಗುತ್ತಿದ್ದಾನೆ. ಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳುವುದು ಇಂದಿನ ವಿದ್ಯಾರ್ಥಿಗಳಲ್ಲಿ ಒಡ ಮೂಡಬೇಕಾದ ಮೌಲ್ಯವಾಗಿದೆ ಎಂದು ತಿಳಿಸಿದರು.
ವೃದ್ಧಾಶ್ರಮದ ಸಂಸ್ಥಾಪಕ ಟಿ ಗುರುಮೂರ್ತಿ ಮತ್ತು ಅವರ ಧರ್ಮಪತ್ನಿ ಉಮಾದೇವಿ ಹಾಗೂ ಅವರ ತಾಯಿಯಾದ ಪಾರ್ವತಮ್ಮನವರು ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕರ ಸೇವಾಕಾರ್ಯವನ್ನು ಪ್ರಶಂಸಿದರು.

ವಿದ್ಯಾರ್ಥಿಗಳು ವೃದ್ಧಾಶ್ರಮದ ಸುತ್ತಲೂ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಅಲ್ಲದೆ ವೃದ್ಧಾಶ್ರಮ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ತಮ್ಮ ಪರಿಸರ ಜಾಗೃತಿ ಮೆರೆದರು. ಎಲ್ಲ ಹಿರಿಯರಿಗೆ ಸಿಹಿ, ಹಣ್ಣು-ಹಂಪಲು ಹಂಚಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಧನಂಜಯ, ಜಯರಾಮ, ಪ್ರಕಾಶ್, ಮಧುಸೂದನ್ , ಯೋಗೇಶ್ ಶಿವರಾಜಕುಮಾರ್, ಗೋವಿಂದರೆಡ್ಡಿ, ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.



