ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ವಿಶ್ವ ಭೂಪಟದಲ್ಲಿ ಭಾರತವನ್ನು ಶಾಂತಿಧೂತ ರಾಷ್ಟ್ರವೆಂದು ವಿದೇಶಿಯರು ಗುರಿತಿಸುವಲ್ಲಿ ಗಾಂಧಿಜಿ ಅವರ ಕೊಡುಗೆ ಅಪಾರವಾಗಿದೆ ಎಂದು ವಕೀಲ ರೇವಣ್ಣ ಬಳ್ಳಾರಿ ಅಭಿಪ್ರಾಯಪಟ್ಟರು.
ನಗರದ ಭಗತ್ ಸಿಂಗ್ ಬಡಾವಣೆಯಲ್ಲಿ ನವ ಚೈತನ್ಯ ಸೇವಾ ಸಂಸ್ಥೆ ಆಯೋಜಿಸಿದ್ದ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧಿಜಿ ಅವರು ಶಾಂತಿ ಮತ್ತು ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದರು. ಅವರು ತಮ್ಮ ಅಹಿಂಸಾ ವಾದದಿಂದಲೇ ಇಡೀ ಜಗತ್ತಿಗೆ ಪರಿಚಿತರಾದವರು. ಅಮೆರಿಕಾ, ಕೆನಡಾ, ಇಂಗ್ಲೆಂಡ್ ಸೇರಿದಂತೆ ಬೇರೆ ದೇಶಗಳಲ್ಲಿ ಇವತ್ತಿಗೂ ಗಾಂಧಿ ಜಯಂತಿಯನ್ನು ಆಚರಿಸುತ್ತಾರೆ ಎಂದರು.
ವಿಶ್ವದ ಭೂಪಟದಲ್ಲಿ ಭಾರತವನ್ನು ಶಾಂತಿಧೂತ ರಾಷ್ಟ್ರವೆಂದು ಗುತಿಸಲು ಗಾಂಧಿಜಿ ಅವರ ಕೊಡುಗೆ ದೊಡ್ಡದಿದೆ. ನಾವೆಲ್ಲ ವಿದೇಶಕ್ಕೆ ಹೋದರೆ, ನಮ್ಮನ್ನು ಶಾಂತಿ ಪ್ರಿಯ ಮಹಾತ್ಮ ಗಾಂಧಿಜಿ ಹುಟ್ಟಿನ ನಾಡಿನಿಂದ ಬಂದವರು ಎನ್ನುವ ಗೌರವ ಕೊಡುತ್ತಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆಪಡುವ ವಿಚಾರವಾಗಿದೆ ಎಂದರು.
ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಅನ್ನೋ ಹಾಗೆ, ಅವರ ಪ್ರಮಾಣಿಕತೆ ಮತ್ತು ಬದ್ಧತೆಗೆ ಎಲ್ಲರು ತಲೆ ಬಾಗಬೇಕಾಗುತ್ತದೆ. ಸಂಕಷ್ಟದ ಸಮಯದಲ್ಲಿಯೂ ಪಾಕಿಸ್ತಾನ ಮೇಲೆ ಯುದ್ಧ ಘೋಷಿಸಿ ಗೆಲುವು ತಂದುಕೊಟ್ಟ ಮಹಾನ್ ಸಾಧಕ ಎಂದರು.



