ಡಿವಿಜಿ ಸುದ್ದಿ,ದಾವಣಗೆರೆ: ಮಾನವೀಯತೆ ಮತ್ತು ಸೇವಾ ಮನೋಭಾವಗಳನ್ನು ನಾನು ಕೆಲವೇ ಡಾಕ್ಟರುಗಳಲ್ಲಿ ಕಂಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಕೇವಲ ವೈದ್ಯರಾಗಿ ಅಷ್ಟೇ ಉಳಿಯದೆ ತಮ್ಮ ಊರಿನ, ತಮ್ಮ ಭಾಗದ, ತಮ್ಮ ತಾಲ್ಲೂಕಿನ ಹಳ್ಳಿಗಳ-ಹಳ್ಳಿಗರ ಜೀವನ ಹಸನಾಗಲಿ ಎಂದು ಕನಸುಕಾಣುತ್ತ ಅದನ್ನು ಕಡೆಗೂ ನನಸು ಮಾಡಿಸಿಕೊಂಡವರು ಡಾ. ಮಂಜುನಾಥ ಗೌಡರು.
22 ಕೆರೆ ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದ ವಿದ್ಯಾನಗರ ನಿವಾಸಿಯಾದ ಡಾ. ಮಂಜುನಾಥ್ ಗೌಡ (52) ಅನಾರೋಗ್ಯದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಭಾನುವಾರ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ 9.40ಕ್ಕೆ ಸಾವನ್ನಪ್ಪಿದ್ದಾರೆ. ಲ್ಯಾಪರೋಸ್ಕೋಪಿ ತಜ್ಞರಾಗಿದ್ದ ಡಾ. ಮಂಜುನಾಥ್, ಬಿಜೆಪಿ ಪಕ್ಷದದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಅವರು ತಾಯಿ, 7 ಸಹೋದರಿಯರು, ಪತ್ನಿ,ಪುತ್ರಿ, ಪುತ್ರರನ್ನು ಅಗಲಿದ್ದಾರೆ.

ಜಗಳೂರು ತಾಲ್ಲೂಕಿನ 22 ಕೆರೆಗಳ ನೀರು ತುಂಬಿಸುವ ಯೋಜನೆಗಾಗಿ ಹಲವು ವರ್ಷಗಳ ಕಾಲ ತಮ್ಮ ಹೋರಾಟವನ್ನು ಮಾಡಿಕೊಂಡು ಬಂದವರು. ಈ ಯೋಜನೆಯ ಅನುಷ್ಠಾನದ ಹಿಂದಿನ ಶಕ್ತಿಯಾದ ಶ್ರೀ ತರಳಬಾಳು ಜಗದ್ಗುರುಗಳವರ ದಿವ್ಯ ಮಾರ್ಗದರ್ಶನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರಲ್ಲೂ ಹೋರಾಟದ ಶಕ್ತಿಯನ್ನು ತುಂಬಿ, ಹಳ್ಳಿಗರ ಭಾವನೆಗಳಲ್ಲಿ ಬಿರುಕು ಕಾಣಿಸಿಕೊಳ್ಳದಂತೆ, ತಮ್ಮ ತಾಲ್ಲೂಕಿನ ಜನರಲ್ಲಿ ಐಕ್ಯತೆ ಮತ್ತು ಒಗ್ಗಟ್ಟಿನ ಬೀಜ ಬಿತ್ತಿದವರು. ಅಂತಹ ಡಾ. ಮಂಜುನಾಥ ಗೌಡರು ಇನ್ನಿಲ್ಲ ಎಂಬ ಸುದ್ದಿ ಈಗಲೂ ನಂಬಲಾಗುತ್ತಿಲ್ಲ.
ಬೇರೆಯವರಂತೆ ಸ್ವಾರ್ಥದ ಸುಳಿಗೆ ಸಿಲುಕಿ, ತಮ್ಮ ಕುಟುಂಬಕ್ಕಷ್ಟೇ ಸೀಮಿತರಾಗದವರು ನನ್ನ ಪ್ರೀತಿಯ ಡಾಕ್ಟರು. ಸಮಾಜದೊಂದಿಗೆ ಬೆಸೆದುಕೊಂಡು ಸೇವೆಯ ಹಾದಿಯಲ್ಲಿ ಜೀವನ ಕಂಡುಕೊಳ್ಳಲು ಹೊರಟಿದ್ದರು. ಇತ್ತೀಚಿಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದ ಅವರ ಸೇವಾಕಾಂಕ್ಷೆಯನ್ನು ತಡರಾತ್ರಿಯವರೆಗೂ ನನಗೆ ವಿವರಿಸಿದ್ದುಂಟು. ನನ್ನೊಂದಿಗೆ ಮಾತನಾಡುವಾಗ ಮಾತಿನ ನಡುವೆ ಅವರು ಹರಿಬಿಡುತ್ತಿದ್ದ ತಿಳಿಹಾಸ್ಯ ನಾನು ಮರೆಯಲು ಅಸಾಧ್ಯ. ಅಂತೆಯೇ ಅವರ ಮನಸ್ಸಿಗೆ ಹಿಡಿಸದ್ದನ್ನು ಮೆಲುದನಿಯಲ್ಲಿಯೇ ತೀಕ್ಷ್ಣವಾಗಿ ಹೇಳುತ್ತಿದ್ದರು.

ಎಲ್ಲರೊಂದಿಗೂ ಆತ್ಮೀಯತೆಯಿಂದ, ಅನುರಾಗದಿಂದ ಇದ್ದಂತವರು ಡಾಕ್ಟರು. ಅಂತಹವರು ಅಪರೂಪದಲ್ಲೇ ಅಪರೂಪ. ಅಂತವರ ಸೇವೆ ಈ ನಾಡಿಗೆ ಇನ್ನೂ ಲಭಿಸಬೇಕಿತ್ತು. ಆದರೆ ದೈವೇಚ್ಛೆ. ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬುದೇ ಈಗಲೂ ನನಗೆ ನಂಬಲಾಗದ ವಿಷಯ. ಅದೇನೇ ಆಗಲಿ ಅವರು ಚಿರಸ್ಮರಣೀಯರು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ದೊರಕಿಸಿಕೊಡಲೆಂದು ಪ್ರಾರ್ಥಿಸುತ್ತೇನೆ.

ಅವರೊಂದಿಗಿನ ಒಡನಾಟ, ಕಳೆದ ಸಮಯ, ಆಡಿದ ಮಾತುಗಳು, ತಿಳಿಹಾಸ್ಯ, ಸಂಘಟನೆ, ಎಲ್ಲವೂ ನೆನಪಾಗಿ ಕಾಡುತ್ತವೆ. ಅವರ ಆದರ್ಶಮಯ ಜೀವನಗಾಥೆಯು ನಿಜಕ್ಕೂ ಅಪರೂಪದ್ದು. ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳ ಆಶಯಗಳಿಗೆ ಸದಾ ಒತ್ತಾಸೆಯಾಗಿ ನಿಂತು ಜಗಳೂರು ಭಾಗದ ಕೆರೆ ತುಂಬಿಸುವ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಿದ ಅವರಿಗೆ ನನ್ನ ಹೃದಯ ತುಂಬಿದ ಶ್ರದ್ದಾಂಜಲಿ.
-ಪ್ರಸನ್ನ ಯು ,ಸನ್ನದು ಆರ್ಥಿಕ ಗುರಿ ಯೋಜಕರು



