ಡಿವಿಜಿ ಸುದ್ದಿ, ಹಾವೇರಿ: ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡುವ ಇಂದ್ರಜಿತ್ ಲಂಕೇಶ್ ದೊಡ್ಡ ಹೀರೋ ಆಗಲು ಹೊರಟಿದ್ದಾರೆ. ಅವರ ಅಕ್ಕ ಗೌರಿ ಲಂಕೇಶ್ ಕೂಡ ಡ್ರಗ್ ಅಡಿಕ್ಟ್ ಆಗಿದ್ದರು ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಡ್ರಗ್ ಮಾಫಿಯಾ ಬಗ್ಗೆ ಮಾತನಾಡುವ ಇಂದ್ರಜಿತ್ ಲಂಕೇಶ್, ಆಗ ಯಾಕೆ ಮಾತನಾಡಲಿಲ್ಲ. ಸರ್ಜಾ ಕುಟುಂಬದವರನ್ನು ಯಾಕೆ ಇದಕ್ಕೆ ಎಳೆದು ತರುತ್ತೀರಾ ಎಂದು ಪ್ರಶ್ನಿಸಿದರು.

ಡ್ರಗ್ ಮಾಫಿಯಾದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳಿದ್ದಾರೆ. ಪೊಲೀಸರು ಮತ್ತು ರಾಜಕಾರಣಿಗಳು ಇಲ್ಲದೆ ಡ್ರಗ್ ಮಾಫಿಯಾ ನಡೆಯಲ್ಲ. ಪೊಲೀಸರಿಗೆ ಎಲ್ಲವೂ ಗೊತ್ತಿರುತ್ತೆ. ದುಡ್ಡು, ಭ್ರಷ್ಟಾಚಾರ, ರಾಜಕೀಯ ಒತ್ತಡದಿಂದ ಬಾಯಿ ಬಿಡಲ್ಲ. ಈಗ ಬೇರು ಸಹಿತ ಕಿತ್ತು ಹಾಕುತ್ತೇವೆ ಎನ್ನುವ ರಾಜಕಾರಣಿಗಳೇ ಇದರಲ್ಲಿ ಇದ್ದಾರೆ ಎಂದರು.
ಪೊಲೀಸರು ನಮ್ಮ ಕಡೆಯಿಂದ ಹುಡುಕಲು ಆಗಲ್ಲ ಅಂತಾ ಕೈ ಎತ್ತಲಿ, ನಾನು ತೋರಿಸುತ್ತೇನೆ ಎಂದು ಮುತಾಲಿಕ್ ಪೊಲೀಸ್ ಇಲಾಖೆಗೆ ಸವಾಲು ಹಾಕಿದರು. ಗೃಹ ಸಚಿವರು ಮತ್ತು ಸಿಟಿ ರವಿ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹೇಳುತ್ತಾರೆ. ಈಗ ಎಲ್ಲ ನಾಟಕ ಮಾಡುತ್ತಾರೆ. ಸ್ವಲ್ಪ ದಿನದಲ್ಲಿ ಎಲ್ಲ ಮರೆತು ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ 2009ರಲ್ಲಿ ಪಬ್ ದಾಳಿ ಆದಾಗಲೆ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದವು. ಅಲ್ಲಿದ್ದವರು ಡ್ರಗ್ ಸೇವನೆ ಮಾಡಿದ್ದರು. ಅವತ್ತು ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದರು.



