ಡಿವಿಜಿ ಸುದ್ದಿ, ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಏಷ್ಯಾದ 2ನೇ ಅತೀ ದೊಡ್ಡ ಕೆರೆ ಸೂಳೆಕೆರೆಯ ಸರ್ವೇ ಕಾರ್ಯ ನಿರ್ಲಕ್ಷ್ಯವನ್ನು ಖಡ್ಗ ಸಂಘಟನೆ ಖಂಡಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಬಿ.ಆರ್. ರಘು, ಜಿಲ್ಲಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮ ಸಂಪೂರ್ಣ ಸರ್ವೇ ನಡೆಸಿ ವರದಿ ನೀಡುವಂತೆ ಸರ್ವೇ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರೂ ಸಹ ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸೂಳೆಕೆರೆಯ ಒತ್ತುವರಿ ತೆರವು ಹಾಗೂ ನೀರಿನಿಂದ ಮುಳುಗಡೆಯಾದ ಜಮೀನುಗಳ ರೈತರ ಪರಿಹಾರಕ್ಕೆ ಯಾವ ಯೋಜನೆ ಕೈಗೊಳ್ಳಲಾಗಿದೆ ಎಂಬುದನ್ನು ಸಹ ತಿಳಿಸಿಲ್ಲ. ಶಾಶ್ವರ ಪರಿಹಾರ ನೀಡುವ ಬಗ್ಗೆ ಮಾಹಿತಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸೂಳೆಕೆರೆಯ ಸರ್ವೆ ಕಾರ್ಯ ಮತ್ತು ಒತ್ತುವರಿ ತೆರವಿಗೆ ಮೂರು ವರ್ಷಗಳಿಂದಲೂ ವಿನಂತಿಸಿಕೊಳ್ಳುತ್ತಿದ್ದೇವೆ ಆದರೂ ಯಾವುದೇ ಪ್ರಯೋಜನವಾಗಿಲ್ಲ.ಕಟ್ಟಡ ನಿರ್ಮಾಣ,ಬೊಟಿಂಗ್,ವಿದ್ಯುತ್ ಘಟಕಗಳ ನಿರ್ಮಾಣದಂತಹ ಕೆಲಸಗಳಿಗೆ ತ್ವರಿತವಾಗಿ ಸ್ಪಂದಿಸುವ ಇಲಾಖೆಗಳು ಸರ್ವೆ ಕಾರ್ಯಕ್ಕೆ ಮತ್ತು ಹೂಳು ತೆಗೆಯುವ ಕೆಲಸಕ್ಕೆ ಗಮನ ನೀಡದಿರುವುದು ದುರಂತ ಎಂದರು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಖಡ್ಗ ಸಂಘದಿಂದಲೇ ಮುಂದಿನ ವರ್ಷ ಹೂಳು ತೆಗೆಯುವ ಯೋಜನೆ ರೂಪಿಸಿದ್ದು ಶೀಘ್ರ ಕೆರೆಯ ಸರಹದ್ದು ಗುರುತಿಸಿ ಕೊಡಬೇಕೆಂದು ಒತ್ತಾಯಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು, ಸಂಸದರು ಹಾಗೂ ಚನ್ನಗಿರಿ ಕ್ಷೇತ್ರದ ಶಾಸಕರು ಮಾಧ್ಯಮಗಳ ಮೂಲಕ ನಮಗೆ ಉತ್ತರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಬಸವರಾಜ್,ಚಂದ್ರಹಾಸ,ಷಣ್ಮುಖ ಸ್ವಾಮಿ ಉಪಸ್ಥಿತರಿದ್ದರು.



