ನವದೆಹಲಿ: ಗಾಂಧಿ ಕುಟುಂಬಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲೇಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಅಮೆರಿಕದ ಶಿಕ್ಷಣ ತಜ್ಞ ಪ್ರದೀಪ್ ಚಿಬ್ಬರ್ ಮತ್ತು ಹರ್ಷ್ ಷಾ ಬರೆದ ‘ಇಂಡಿಯಾ ಟುಮಾರೊ: ಮುಂದಿನ ತಲೆಮಾರಿನ ರಾಜಕೀಯ ನಾಯಕರೊಂದಿಗೆ ಸಂಭಾಷಣೆಗಳು’ ಪುಸ್ತಕದಲ್ಲಿ ಪ್ರಿಯಾಂಕಾ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತಾಯಿ ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿ ಮತ್ತೆ ನೇಮಕವಾದರು. ಈಗ ರಾಹುಲ್ ಅಥವಾ ಪ್ರಿಯಾಂಕಾ ಗಾಂಧಿಗೆ ಮತ್ತೆ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಈ ಸಮಯದಲ್ಲೇ ಪ್ರಿಯಾಂಕಾ ಗಾಂಧಿಯ ಹೇಳಿದ ಮಾತು ಚರ್ಚೆಗೆ ಗ್ರಾಸವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದಕ್ಕೆ ನೈತಿಕ ಹೊಣೆಯನ್ನು ಹೊತ್ತು ರಾಹುಲ್ ಗಾಂಧಿ ಮೇ 25 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸೋನಿಯಾ ಗಾಂಧಿ ಅವರು ನಾನು ಪೂರ್ಣಾವಧಿಗೆ ಅಧ್ಯಕ್ಷೆ ಸ್ಥಾನದಲ್ಲಿ ಇರುವುದಿಲ್ಲ. ಮುಂದಿನ ಅಧ್ಯಕ್ಷರ ನೇಮಕದವರೆಗೆ ಹಂಗಾಮಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದರು. ಪ್ರಿಯಾಂಕಾ ಗಾಂಧಿ ಹೇಳಿಕೆಯಿಂದ ಮುಂದೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಸಿಗುತ್ತೆ ಎಂಬುದನ್ನು ಕುತೂಹಲ ಮೂಡಿಸಿದೆ.



