ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾಡಳಿತದ ವತಿಯಿಂದ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ರಾಷ್ಟ್ರ ಧ್ವಜಾರೋಹಣೆ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆ ಸಂದೇಶ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿ ಸ್ವಾತಂತ್ರ್ಯವೆಂಬ ಅಮೃತ ಫಲ ಭಾರತಕ್ಕೆ ದೊರೆತದ್ದು ಈಗ ಇತಿಹಾಸವಾದರೂ, ಈ ಸ್ವಾತಂತ್ರ್ಯವೆಂಬ ಶಾಂತಿಯ ನೆಲೆಯಲ್ಲಿ ಸಾಗಬೇಕಿದೆ. ಇಡೀ ವಿಶ್ವವೇ ಕೊರೊನಾ ವೈರಸ್ ದಾಳಿಯಿಂದ ತಲ್ಲಣಗೊಂಡಿದೆ. ನಾವೆಲ್ಲರೂ ಇದನ್ನು ದಿಟ್ಟವಾಗಿ ಎದುರಿಸುತ್ತಿದ್ದು, ಕೊರೊನಾ ಜೊತೆ ಜೊತೆಗೇ ಅಭಿವೃದ್ದಿಯೆಡೆ ನಡೆಯಬೇಕಿದೆ ಎಂದು ನುಡಿದರು.
ಆಕರ್ಷಕ ಪಥ ಸಂಚಲನ : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ವಿದ್ಯಾರ್ಥಿಗಳ ತಂಡಗಳನ್ನು ಹೊರತುಪಡಿಸಿ ಸರ್ಕಾರಿಯ 6 ತಂಡಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನ ನಡೆಯಿತು. ಡಿಎಆರ್ನ ಆರ್ಪಿಐ ಎಸ್.ಎನ್.ಕಿರಣ್ ಕುಮಾರ್ ಅವರು ಕವಾಯತುನ ಪ್ರಧಾನ ನಾಯಕತ್ವ ವಹಿಸಿದ್ದರು. ರಾಘವೇಂದ್ರ ರಾಮತಾಳ ನೇತೃತ್ವದ ಡಿ.ಎ.ಆರ್ ಪೊಲೀಸ್ ತಂಡ, ಪಿಎಸ್ಐ ನೂರ್ ಆಹಮದ್ ನೇತೃತ್ವದ ನಾಗರಿಕ ಪೊಲೀಸ್ ತಂಡ, ಅಂಬರೀಶ ಕೆ.ಎಸ್ ನೇತೃತ್ವದ ಗೃಹರಕ್ಷಕ ದಳ ತಂಡ, ಭರತೇಶ್ ನೇತೃತ್ವದ ಅಬಕಾರಿ ಜಿಲ್ಲಾ ತಂಡ, ವೆಂಕಟೇಶ್ ನಾಯ್ಕ ನೇತೃತ್ವದ ಜಿಲ್ಲಾ ಅರಣ್ಯ ಇಲಾಖೆ ತಂಡ, ಸುಹಾಸ್.ಪಿ ನೇತೃತ್ವದ ಅಗ್ನಿಶಾಮಕ ದಳ ತಂಡವು ಮುಖ್ಯ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಆಕರ್ಷಕ ಪಥಸಂಚಲನ ನಡೆಸಿದವು. ಈ 6 ತಂಡಗಳಿಗೆ ಡಿಎಆರ್ನ ಎಆರ್ಎಸ್ಐ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ಶುಶ್ರಾವ್ಯ ವಾದ್ಯ ನುಡಿಸಿದರು.

ಕೋವಿಡ್ ವಾರಿಯರ್ಸ್ಗೆ ಸನ್ಮಾನ : ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜಿಲ್ಲೆಯ ಸಾರ್ವಜನಿಕರ ಹಾಗೂ ಸೋಂಕಿತರ ಆರೈಕೆ ಮತ್ತು ಆರೋಗ್ಯದ ಹಿತಕ್ಕಾಗಿ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಹಗಲಿರುಳು ಅವಿರತವಾಗಿ ಶ್ರಮಿಸಿದ ಸರ್ಕಾರಿ ನೌಕರರ ಸೇವೆ ಅನನ್ಯವಾದದು. ಸಾಂಕ್ರಾಮಿಕ ರೋಗದಂತಹ ಆತಂಕದ ಸನ್ನಿವೇಶದಲ್ಲಿ ಯುದ್ದೋಪಾದಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದಿಂದ ಪ್ರಶಂಸನಾ ಪತವನ್ನ್ರು ಅಭಿನಂದನಾ ಪೂರ್ವಕವಾಗಿ ಸಚಿವರು ವಿತರಿಸುವ ಮೂಲಕ ಸನ್ಮಾನಿಸಲಾಯಿತು.
ವಿಕಲಚೇತನರಿಗೆ ವಾಹನ ವಿತರಣೆ : 2019-20ನೇ ಸಾಲಿನಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲಿಕರಣ ಇಲಾಖೆ ವತಿಯಿಂದ ಜಿಲ್ಲೆಗೆ 56 ಯಂತ್ರಚಾಲಿತ ದ್ವಿಚಕ್ರ (ರೆಟ್ರೋಫಿಟ್ಮೆಂಟ್ ಸಹಿತ ವಾಹನ) ವಾಹನಗಳು ಮಂಜೂರಾಗಿದ್ದು, ಸ್ವಾತಂತ್ರ್ಯ ದಿನದ ಅಂಗವಾಗಿ ಸಚಿವರಾದ ಬಿ.ಎ ಬಸವರಾಜ ಅವರು 14 ಫಲಾನುಭವಿಗಳಿಗೆ ವಿತರಣೆ ಮಾಡಿದರು. ಉಳಿದ ಫಲಾನುಭವಿಗಳಿಗೆ ಅಗಸ್ಟ್ 15 ನಂತರ ವಿತರಿಸಲಾಗುವುದು.
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ನ ಪ್ರಚಾರ ವಾಹನಕ್ಕೆ ಚಾಲನೆ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರಗಳ ಸಮೇತ ಸ್ವಯಂ ದಾಖಲಿಸುವ ವಿನೂತನ ಯೋಜನೆಯ ‘ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಪ್ರಚಾರ ವಾಹನಕ್ಕೆ’ ಸಚಿವರು ಚಾಲನೆ ನೀಡಿದರು.

ಅಂಧ ಮಕ್ಕಳಿಗೆ ಟಾಕಿಂಗ್ ಲ್ಯಾಪ್ಟಾಪ್ ವಿತರಣೆ : ದೃಷ್ಟಿದೋಷ ಉಳ್ಳವರಿಗೆ ಟಾಕಿಂಗ್ ಲ್ಯಾಪ್ಟಾಪ್ಗಳನ್ನು ವಿತರಿಸಲು ಜಿಲ್ಲೆಗೆ 20 ಲ್ಯಾಪ್ಟಾಪ್ ನೀಡಲಾಗಿದೆ. ಅದರಂತೆ ಕೋವಿಡ್ ಹಿನ್ನಲೆಯಲ್ಲಿ 3 ಜನರಿಗೆ ಸಾಂಕೇತಿಕವಾಗಿ ಸಚಿವರು ವಿತರಿಸಿದರು.ಜಿಲ್ಲೆಗೆ 25 ಟಾಕಿಂಗ್ ಲ್ಯಾಪ್ಟಾಪ್ಗಳನ್ನು ವಿತರಿಸಲು ಗುರಿ ನೀಡಿದೆ. ಅದರಂತೆ 25 ಫಲಾನುಭವಿಗನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗಿತ್ತು.

ವಿದ್ಯಾರ್ಥಿಗಳಿಗೆ ಸನ್ಮಾನ : ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ, ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ.ಅಜಯ ಕುಮಾರ್, ದೂಡಾ ಅಧ್ಯಕ್ಷ ರಾಜನಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡಿದ್ದರು.