ಡಿವಿಜಿ ಸುದ್ದಿ, ಬೆಂಗಳೂರು: ಲಾಕ್ ಡೌನ್ ಜನರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಆದರೆ ಲಾಕ್ಡೌನ್ನಿಂದ ವೈರಸ್ ಹರಡುವುದನ್ನು ಮುಂದೂಡಬಹುದೇ ಹೊರತು ತಡೆಯಲು ಸಾಧ್ಯವಿಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ಡೌನ್ ಮತ್ತೆ ಹೇರುವ ಬಗ್ಗೆ ಇಲ್ಲಿಯ ವರೆಗೆ ನಮಗೆ ಒಲವು ಇಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಅನಿವಾರ್ಯ ಪರಿಸ್ಥಿತಿ ಬಂದರೆ ಶನಿವಾರ ಲಾಕ್ ಡೌನ್ ಮಾಡ್ತೀವಿ ಎಂದರು.
ಕೊರೊನಾ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಶನಿವಾರ ಕೂಡ ಲಾಕ್ ಡೌನ್ ಮಾಡಬೇಕೋ ಬೇಡವೋ ಎಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಪಿಪಿಇ ಕಿಟ್ ಬೆಲೆ ಮಾರ್ಕೆಟ್ ನಲ್ಲಿ ಹೆಚ್ಚು ಇತ್ತು. ದಿನ ಕಳೆದಂತೆ ಅದರ ಬೆಲೆ ಕಡಿಮೆ ಆಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ವಿಪಕ್ಷಗಳು ಸಂಕಷ್ಟ ಸಮಯದಲ್ಲಿ ಸರ್ಕಾರದ ಜೊತೆ ನಿಲ್ಲುವುದು ಬಿಟ್ಟು, ಇಂತಹ ಆರೋಪ ಮಾಡುವುದರಲ್ಲಿ ಸತ್ಯಾಂಶವಿಲ್ಲ. ಕೋವಿಡ್ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಆರೋಪದಲ್ಲಿ ರಾಜಕೀಯ ಮಾಡಬಾರದು. ಜನರ ತೆರಿಗೆ ಹಣ ಯಾವುದೇ ಕಾರಣಕ್ಕೂ ನಷ್ಟವಾಗಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.



