ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಪಾಸಿಟಿವ್ ಪತ್ತೆಯಲ್ಲಿ ಕೈ ಮೀರಿ ಹೋಗುತ್ತಿರುವ ಬೆಂಗಳೂರಲ್ಲಿ ನಗರವನ್ನು 8 ವಲಯಗಳನ್ನಾಗಿ ಮಾಡಿ, ಎಂಟು ಸಚಿವರಿಗೆ ಉಸ್ತುವಾರಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಎಂಟು ಸಚಿವರ ಜತೆ ಚರ್ಚೆ ನಡೆಸಲಿದ್ದಾರೆ. ಎಂಟು ಸಚಿವರು ನಗರದ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಮುಂದಿನ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದರು.
ರಾಜ್ಯದ ಎಲ್ಲ ಕಡೆಗಳಲ್ಲಿ ಟೆಸ್ಟಿಂಗ್ ಲ್ಯಾಬ್ ಗಳಲ್ಲಿ ಬೇಗನೆ ಫಲಿತಾಂಶ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೈಫ್ಲೊ ಆಕ್ಸಿಜನ್ ಅಳವಡಿಸುವುದು ಮತ್ತು ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ.
ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಉದ್ದೇಶದಿಂದ ಕೃಪಾಂಕ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದ. 2.5 ರಿಂದ 30 ರವರೆಗೆ ನೀಡಲು ತೀರ್ಮಾನಿಸಲಾಗಿದೆ. 6 ತಿಂಗಳು ಸೇವೆ ಮಾಡಿದವರಿಗೆ 2.5 ಅಂಕ ಸಿಗುತ್ತದೆ. ಸೇವೆಯ ಕಾಲಾವಧಿ ಹೆಚ್ಚಾದಷ್ಟೂ ಕೃಪಾಂಕವೂ ಹೆಚ್ಚುತ್ತದೆ. ವಯೋಮಿತಿಯ ನಿರ್ಬಂಧವನ್ನು 21 ರಿಂದ 26 ವರ್ಷಗಳಿಗೆ ಏರಿಸಲಾಗಿದೆ. ಆಯುಷ್ ವೈದ್ಯರಿಗೂ ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.