ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಗ್ರಾಮ ಪಂಚಾಯತಿ ದಿನಗೂಲಿ ನೌಕರರು ತಮ್ಮ ವೇತನ ಬಿಡುಗಡೆಗೆ ಆಗ್ರಹಿಸಿ ಅಧಿಕಾರಿಗಳನ್ನು ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.
ಅರಸೀಕೆರೆ ಗ್ರಾಮ ಪಂಚಾಯ್ತಿ ಪಿಡಿಓ ಮಹಮ್ಮದ್ ಹುಸೇನ್ ಹಾಗೂ ಸಹಾಯಕ ಲೆಕ್ಕಾಧಿಕಾರಿ ಅಶೋಕ್ ಟಕ್ಕಳಿಕೆ ಅವರನ್ನು ಕೂಡಿಹಾಕಿದ ದಿನ ಗೂಲಿ ನೌಕರರು ಕೂಡಲೇ ನಮ್ಮ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಅರಸೀಕೆರೆ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೆ ಕಳೆದ 20 ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಬೇಸತ್ತ ನೌಕರರು ಇಂದು ಪ್ರತಿಭಟನೆ ನಡೆಸಿದ್ದಾರೆ.

ಪಿಡಿಒ ಬಳಿ ವೇತನ ಕೇಳಲು ಹೋದರೆ ಕಂದಾಯ ವಸೂಲಿಯಾಗಿಲ್ಲ. ವಸೂಲಾತಿ ಆದಮೇಲೆ ಸಂಬಳ ಕೊಡುತ್ತೇನೆ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ಪತ್ರ ಬರೆದುಕೊಟ್ಟು ಹೋಗಿ ಎಂದು ಹೇಳುತ್ತಾರೆ. ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿದೆ. ಇದನ್ನೇ ನಂಬಿಕೊಂಡು ಸಂಸಾರ ನಡೆಸುತ್ತಿದ್ದೇವೆ. ಇಡೀ ಕುಟುಂಬ ಬೀದಿಪಾಲಾಗಿದೆ. ಹೀಗಾಗಿ ಪಿಡಿಒ ಹಾಗೂ ಲೆಕ್ಕಾಧಿಕಾರಿಗಳನ್ನು ಕೂಡಿ ಹಾಕಿ ಗ್ರಾಮ ಪಂಚಾಯತಿಗೆ ಬೀಗ ಹಾಕಿದ್ದೇವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಶಶಿಕುಮಾರ್, ಸುನೀಲ್ ಕುಮಾರ್, ಎಮ್. ನಾಗರಾಜ್, ಮಂಜಪ್ಪ, ಕಣುವಪ್ಪ, ರೈತ ಸಂಘದ ಮುಖಂಡ ಅರಸಾಪುರದ ಕಾಳಪ್ಪ, ದುರುಗಪ್ಪ ಹಾಜರಿದ್ದರು.



