ಡಿವಿಜಿ ಸುದ್ದಿ, ಬಾಗಲಕೋಟೆ: ಸಾರಿಗೆ ಇಲಾಖೆ ನೌಕರರ ಜೂನ್ ತಿಂಗಳ ವೇತನ 326 ಕೋಟಿಯಲ್ಲಿ ಅರ್ಧಭಾಗ ಸರ್ಕಾರವೇ ಪಾವತಿಸಲಿದೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಜನರು ಬಸ್ಗಳನ್ನು ಹತ್ತಲು ಇನ್ನೂ ಹಿಂಜರಿಯುತ್ತಿದ್ದಾರೆ. ಸಾಮಾಜಿ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ಇದರಿಂದ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಈ ಸಂದರ್ಭದಲ್ಲು ಸರ್ಕಾರದ ನೆರವು ಅನಿವಾರ್ಯ ಎಂದರು.
ಲಾಕ್ ಡೌನ್ ನಿಂದ ನಾಲ್ಕು ನಿಗಮಗಳಿಗೆ 2300 ಕೋಟಿ ನಷ್ಟವಾಗಿದೆ. ಇದನ್ನು ಚೇತರಿಸಿಕೊಳ್ಳಬೇಕಿದೆ. ಕೋವಿಡ್-19 ಸಂಕಷ್ಟ ಸಂಪೂರ್ಣ ಪರಿಹಾರವಾಗಿ ಸಾರಿಗೆ ಸಂಸ್ಥೆಯ ದೈನಂದಿನ ವಹಿವಾಟು ಸಹಜ ಸ್ಥಿತಿಗೆ ಬರುವವರೆಗೂ ನೌಕರರ ವೇತನ ಪಾವತಿಸಲು ಸರ್ಕಾರದ ನೆರವು ಪಡೆಯುವ ಬಗ್ಗೆ ಅದಕ್ಕೆ ವಿಶೇಷ ನಿಧಿ ಸ್ಥಾಪಿಸುವ ಕುರಿತು ಸಿಎಂ ಜೊತೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜೂನ್ ತಿಂಗಳು ಸೇರಿದಂತೆ ಮುಂದಿನ ದಿನಗಳಲ್ಲಿ ವೇತನದ ಬಗ್ಗೆ ಸಾರಿಗೆ ಸಂಸ್ಥೆ ನೌಕರರು ಚಿಂತಿಸುವ ಅಗತ್ಯವಿಲ್ಲ. ಯಾರಿಗೂ ಸಂಬಳ ಕಡಿತ ಮಾಡುವುದಿಲ್ಲ. ಎಲ್ಲರಿಗೂ ನಿಗದಿತ ಅವಧಿಯಲ್ಲಿಯೇ ಸಂಬಳ ನೀಡಲಾಗುವುದು ಎಂದರು. ಸಾರಿಗೆ ಸಂಸ್ಥೆಯಲ್ಲಿ ವೆಚ್ಚ ಕಡಿತದ ಕಾರಣಕ್ಕೆ ಸಿಬ್ಬಂದಿ ಕಡಿತಗೊಳಿಸುವ ಇಲ್ಲವೇ ಗುತ್ತಿಗೆ ನೌಕರರನ್ನು ಮನೆಗೆ ಕಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದರು.



