ಡಿವಿಜಿ ಸುದ್ದಿ, ಸಿರಿಗೆರೆ: ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪರಿಷ್ಕರಣೆಗೊಳ್ಳಿಸುವ ಅಗತ್ಯವಿದೆ. ಈ ಬಗ್ಗೆ ಯೋಜನೆ ವ್ಯಾಪ್ತಿಯ ಶಾಸಕರು, ಸಂಸದರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ತರಳಬಾಳು ಬೃಹನ್ಮಠದ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಿರಿಗೆರೆಯಲ್ಲಿ ಸಾಸ್ವೆಹಳ್ಳಿ ಏತನೀರಾವರಿ ಯೋಜನೆಗೆ ಕುರಿತು ಕರೆದಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಸಾಸ್ವೆಹಳ್ಳಿ ಏತನೀರಾವರಿಗೆ ಆರಂಭದಲ್ಲಿ 120 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿತ್ತು. ಅದಕ್ಕನುಗುಣವಾಗಿ ಜಾಕ್ವೆಲ್ ಗಾತ್ರ ಪಂಪ್ಸೆಟ್ ಪ್ರಮಾಣ ಹಾಗೂ ಪೈಪ್ಗಳ ಗಾತ್ರ ನಿಗದಿಯಾಗಿತ್ತು. ಆದರೆ ಯೋಜನೆಗೆ ಸೇರುವ ಕೆರೆಗಳ ಸಂಖ್ಯೆ 160-170ಕ್ಕೆ ವಿಸ್ತರಣೆಯಾಗಿರುವುದರಿಂದ ಈಗಿರುವ ಜಾಕ್ವೆಲ್ ವಿಸ್ತೀರ್ಣ, ಮೋಟರ್ ಪಂಪ್ ಗಾತ್ರವನ್ನು ಬದಲಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಯೋಜನೆಗೆ ಸೇರಬೇಕಾದ ಕೆರೆಗಳು ಎಷ್ಟು ಎಂಬುದನ್ನು ನಿಗದಿಪಡಿಸದೆ ಯೋಜನೆ ಯಶಸ್ವಿಯಾಗುವುದಿಲ್ಲ. ಯೋಜನೆ ವ್ಯಾಪ್ತಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ, ಎ.ನಾರಾಯಣಪ್ಪ, ಬಿ.ವೈ.ರಾಘವೇಂದ್ರ, ಶಾಸಕರಾದ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಪ್ರೊ.ಲಿಂಗಣ್ಣ, ಎಂ.ಚಂದ್ರಪ್ಪ, ಜಿ.ಎಚ್.ತಿಪ್ಪಾರೆಡ್ಡಿ, ಅಶೋಕ್ನಾಯ್ಕ್ ಅವರ ಸಭೆಯನ್ನು ಕರೆದು ಚರ್ಚಿಸಲು ದಿನಾಂಕ ನಿಗದಿಪಡಿಸಲಾಗುವುದ.
ಶಿವಮೊಗ್ಗ, ಹೊನ್ನಾಳಿ, ಮಾಯಕೊಂಡ, ಚನ್ನಗಿರಿ, ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳ 120 ಕೆರೆಗಳಿಗೆ ಯೋಜನೆಯ ಪ್ರಕಾರ 30 ತಿಂಗಳ ಅವಧಿಯಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಗೆ ಕೆರೆಗಳನ್ನು ಸೇರಿಸುವುದರಿಂದ ಯೋಜನೆ ವಿಳಂಬವಾಗುತ್ತಿದೆ ಎಂದು ತಿಳಿಸಿದರು.

ಯೋಜನೆಯಲ್ಲಿ ಸೇರ್ಪಡೆಯಾ ಗಿರುವ ಕೆರೆಗಳ ಪಟ್ಟಿಯನ್ನು ಕರ್ನಾಟಕ ನೀರಾವರಿ ನಿಗಮದಿಂದ ಪಡೆದು ಸಂಸದರು ಮತ್ತು ಶಾಸಕರಿಗೆ ಒದಗಿಸುವುದು. ಸೇರಿಸಬೇಕಾದ ಕೆರೆಗಳ ಅಂತಿಮ ಪಟ್ಟಿಯನ್ನು ನ್ಯಾಯಪೀಠದ ಮೂಲಕ ನೀರಾವರಿ ನಿಗಮಕ್ಕೆ ಸಲ್ಲಿಸಲಾಗುವುದು. ಪರಿಷ್ಕೃತ ಯೋಜನೆಗೆ ಅಗತ್ಯವಾದ ಹಣವನ್ನು ಸಂಸದರು ಮತ್ತು ಶಾಸಕರು ಸರ್ಕಾರದಿಂದ ಬಿಡುಗಡೆ ಮಾಡುವುದಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಶಾಂತನಗೌಡ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಅನಿತ್ಕುಮಾರ್, ನೀರಾವರಿ ನಿಗಮದ ಯೋಜನೆ ಸಂಬಂಧಪಟ್ಟ ರೈತ ಮುಖಂಡರು, ಮುತ್ತುಗದೂರು ರುದ್ರಪ್ಪ, ಸಾಸಲು ದೇವರಾಜು, ಓಂಕಾರಪ್ಪ, ಎಂಜಿನಿಯರ್ ಯತೀಶ್ ಚಂದ್ರ, ಮಲ್ಲಪ್ಪ, ಚಂದ್ರಶೇಖರಯ್ಯ, ವಿಜಯಕುಮಾರ್, ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.



