ಡಿವಿಜಿ ಸುದ್ದಿ, ಹಳೇಬೀಡು: ಸಿರಿಗೆರೆಯ ತರಳಬಾಳು ಬೃಹನ್ಮಠವು ಇತ್ತೀಚಿನ ದಿನಗಳಲ್ಲಿ ಕರ್ನಾಟಕ ನೀರಾವರಿ ನಿಗಮದ ವಿಸ್ತರಣಾ ಕಚೇರಿಯಂತಾಗಿದೆ ಎಂದು ತರಳಬಾಳು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಶೀರ್ವಚನದಲ್ಲಿ ಅಭಿಪ್ರಾಯಪಟ್ಟರು.
ತರಳಬಾಳು ಹುಣ್ಣಿಮೆ ಮಹಹೋತ್ಸವದ 7ನೇ ದಿನದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದ ಶ್ರೀಗಳು, ಅಧಿಕಾರಿಗಳು ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುತ್ತಿದ್ದಾರೆ. ತುಂಬಾ ಆಸಕ್ತಿಯಿಂದ ಶ್ರಮ ವಹಿಸಿ ಭರಮಸಾಗರ ಮತ್ತು ಜಗಳೂರು ಭಾಗದ ಕೆರೆಗಳನ್ನು ತುಂಬಿಸುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತಿದ್ದಾರೆ ಎಂದರು.

ವಿಜ್ಞಾನ ಮತ್ತು ಧರ್ಮಕ್ಕೂ ಪ್ರಾಚೀನ ಕಾಲದಿಂದಲೂ ಸಂಬಂಧವಿದೆ. ಹಿಂದೆ ಆತ್ಮದ ಜ್ಞಾನವನ್ನು ವಿಶೇಷ ಜ್ಞಾನವೆನ್ನುತ್ತಿದ್ದರು.ಇಂದಿನ ವಿಜ್ಞಾನವನ್ನು ಅಂದು ಸಾಮಾನ್ಯ ಜ್ಞಾನವೆಂದು ತಿಳಿದಿದ್ದರು. ಬಾಹ್ಯಾಕಾಶ ಸಂಶೋಧನೆಗಳಿಂದ ಜನಸಮಾನ್ಯರಿಗೆ ಅನೇಕ ರೀತಿಯಲ್ಲಿ ಅನುಕೂಲವಾಗಿದೆ ಎಂದರು.
ಶ್ರೀ ಶಿವಲಿಂಗಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಗುರುಗಳ ಮಾರ್ಗದರ್ಶನದಲ್ಲಿ ಸನ್ನಡತೆ, ಸದ್ವಿಚಾರಗಳಿಂದ ನಡೆದರೆ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ತರಳಬಾಳು ಹುಣ್ಣಿಮೆ ಮೂಲಕ ಸಮಾಜದ ಕೊಳೆ ತೊಳೆಯುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಬರದ ನಾಡನ್ನು ಬನದ ನಾಡನ್ನಾಗಿಸುವ ಶ್ರೀಗಳ ಸಂಕಲ್ಪ ಮಾದರಿಯಾದುದು. ಇಂತಹ ಶ್ರೀಗಳನ್ನು ಪಡೆದ ನಾಡು ಧನ್ಯ ಎಂದು ಶ್ಲಾಘಿಸಿದರು.
ಬಾಹ್ಯಾಕಾಶ ಸಂಶೋಧನೆಗಳ ಪ್ರಯೋಜನಗಳು ಕುರಿತು ಇಸ್ರೋದ ಯೋಜನಾ ನಿರ್ದೇಶಕರು ಮತ್ತು ಹಿರಿಯ ವಿಜ್ಞಾನಿ ಡಾ. ಟಿ.ಕೆ. ಅನುರಾಧ ಮಾತನಾಡಿದರು.ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ವಚನಗಳ ನೀತಿ ಸಂಹಿತೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮಾತನಾಡಿ, ತರಳಬಾಳು ಶ್ರೀಗಳು ಬಯಲು ಸೀಮೆಯ ಕೆರೆಗಳನ್ನು ತುಂಬಿಸುವುದರ ಬಗ್ಗೆ ಅಪಾರ ಶ್ರಮ, ಸಮಯ ವಿನಿಯೋಗಿಸಿದ್ದಾರೆ. ತುಂಗಭದ್ರಾ ನದಿಯಲ್ಲಿ ಹರಿಯುವ ನೂರಾರು ಟಿ ಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಆ ನೀರನ್ನು ಭರಮಸಾಗರ ಮತ್ತು ಜಗಳೂರು ಭಾಗದ ಕೆರೆಗಳಿಗೆ ತುಂಬಿಸುವುದು ಶ್ರೀಗಳ ದೊಡ್ಡ ಕನಸು.ಶ್ರೀಗಳು ಪ್ರಯತ್ನದ ಫಲವಾಗಿ, ಮೂವರು ಮುಖ್ಯ ಮಂತ್ರಿಗಳ ಅವಧಿಯಲ್ಲಿ ಅನುಮೋದನೆ ಪಡೆದು, ಯೋಜನೆ ಅನುಷ್ಠಾನಗೊಳಿಸಿದ್ದಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ,ಸಾಣೇಹಳ್ಳಿ ಶಾಖಾ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಉಪಸ್ಥಿತರಿದ್ದರು. ಬೇಲೂರಿನ ಪೂರ್ಣಪ್ರಜ್ಞಾ ಪ್ರೌಢಶಾಲೆ, ಸರ್ವೋದಯ ಪ್ರೌಢಶಾಲೆ, ಸಿರಿಗೆರೆ ಬಿ. ಲಿಂಗಯ್ಯ ವಸತಿ ಪ್ರೌಢಶಾಲೆಯ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.



