ಡಿವಿಜಿ ಸುದ್ದಿ, ಸಿರಿಗೆರೆ: ಆಂಧ್ರಪ್ರದೇಶದ ನಂದ್ಯಾಲದಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದ ಕರ್ನಾಟಕದ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೊರೊನಾ ಹಿನ್ನೆಲೆಯ ಲಾಕ್ ಡೌನ್ ನಿಂದ ತೊಂದರೆಗೆ ಒಳಗಾಗಿ ಅಲ್ಲಿಯೇ ಇರುವಂತ ಸ್ಥಿತಿ ನಿರ್ಮಾಣವಾಗಿತ್ತು.

ಈ ಎಲ್ಲಾ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇಲ್ಲದೇ ಅತಂತ್ರ ಪರಿಸ್ಥಿತಿ ಬಂದೊದಗಿತ್ತು. ಯಾರು ಸಹಾಯ ಮಾಡಲು ಆಗದ ಸಂದರ್ಭದಲ್ಲಿ ಅಸಾಹಯಕ ವಿದ್ಯಾರ್ಥಿಗಳು ತರಳಬಾಳು ಶ್ರೀ ಜಗದ್ಗುರುಗಳವರ ಮೊರೆ ಹೋಗಿದ್ದರು. ವಿದ್ಯಾರ್ಥಿಗಳ ಮೊರೆಗೆ ಸ್ಪಂದಿಸಿದ ಶ್ರೀ ಜಗದ್ಗುರುಗಳವರು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಗೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕಾಳಜಿ ಹಾಗೂ ನಿರಂತರ ಸಂಪರ್ಕದಿಂದ ವಿದ್ಯಾರ್ಥಿಗಳ ಯೋಗಕ್ಷೇಮ ದೊಂದಿಗೆ ಅವರಿಗೆ ಒಂದೂವರೆ ತಿಂಗಳ ಕಾಲ ನಿರಂತರವಾಗಿ ಸ್ಥಳೀಯ ಶಿಷ್ಯರಿಂದ ದಾಸೋಹದ ವ್ಯವಸ್ಥೆ ಮಾಡಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.

ಲಾಕ್ ಡೌನ್ ನಲ್ಲಿ ಸಿಲುಕಿದ್ದ ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣ ಮಾಡಲು ಇತ್ತೀಚೆಗೆ ಅನುಮತಿ ದೊರೆತಿದ್ದು, ವಾರದ ಹಿಂದೆ ತೆಲಂಗಾಣದ ಸುಮಾರು 600 ವಿದ್ಯಾರ್ಥಿಗಳನ್ನು ಅಲ್ಲಿನ ಸರಕಾರ ಹಿಂದಕ್ಕೆ ಕರೆಸಿಕೊಂಡಿರುತ್ತದೆ. ಆದರೆ ನಮ್ಮ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಮನಸ್ಸು ಮಾತ್ರ ಯಾರಿಗೂ ಇದ್ದಂತೆ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿ ಸಿಲುಕಿಹಾಕಿಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಮತ್ತೊಮ್ಮೆ ಶ್ರೀ ತರಳಬಾಳು ಜಗದ್ಗುರುಗಳವರೇ ಸ್ಪಂದಿಸಿದ್ದಾರೆ.

ಕಳೆದ ಒಂದು ವಾರದಿಂದ ಶ್ರೀ ಜಗದ್ಗುರುಗಳವರು ಸತತ ಪ್ರಯತ್ನ ಮಾಡಿ ಅಲ್ಲಿನ ನೋಡಲ್ ಆಫೀಸರೊಂದಿಗೆ ಮಾತನಾಡಿ ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ. ನಂದ್ಯಾಲದಲ್ಲಿರುವ ಕರ್ನಾಟಕದ ಸುಮಾರು 300 ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ದಿನ ಬಸ್ಸುಗಳಲ್ಲಿ ತಮ್ಮ ಊರುಗಳಿಗೆ ಹೊರಟಿದ್ದು, ಅವರೆಲ್ಲರೂ ಈ ಸಂಜೆ ಬಳ್ಳಾರಿ ತಲುಪಿ ಅಲ್ಲಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅವರ ಊರುಗಳಿಗೆ ಪ್ರಯಾಣ ಬೆಳೆಸಲಿದ್ದಾರೆ.

ವಿದ್ಯಾರ್ಥಿಗಳು ತಾಯ್ನಾಡಿಗೆ ಬರುವ ಸಂತೋಷವು ಇಮ್ಮಡಿಯಾಗಿದ್ದು, ಅತ್ಯಂತ ಭಾವುಕರಾಗಿ ಕಷ್ಟ ಕಾಲದಲ್ಲಿ ಅತ್ಯಂತ ಕಾಳಜಿಯಿಂದ ನೆರವಾದ ಶ್ರೀ ಜಗದ್ಗುರುಗಳವರಿಗೆ ನಂದ್ಯಾಲದಲ್ಲಿ ಹೊರಟುನಿಂತ ಬಸ್ಸುಗಳ ಭಾವಚಿತ್ರಗಳನ್ನು ಕಳುಹಿಸಿ ಪೂಜ್ಯರಿಗೆ ರವಾನಿಸಿ ಆನಂದ ಬಾಷ್ಪದ ಪ್ರಣಾಮಗಳನ್ನು ಅರ್ಪಿಸಿದ್ದಾರೆ.