ಡಿವಿಜಿ ಸುದ್ದಿ, ವಿಜಯಪುರ: ನಳೀನ್ ಕುಮಾರ್ ಕಟೀಲ್ ಗೆ ರಾಜಕೀಯ ಜ್ಞಾನವಿಲ್ಲ. ಅವರಿಗೆ ಅಧ್ಯಕ್ಷ ಸ್ಥಾನ ಹೇಗೆ ಕೊಟ್ಟರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮಂಗಳೂರಿನಲ್ಲಿ ನಿನ್ನೆ ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತಿಗೆ ಪ್ರತಿಕ್ರಿಯಿಸಿದ ಅವರು, ಕಟೀಲ್ ಗೆ ರಾಜಕೀಯ ಜ್ಞಾನ ಇಲ್ಲ. ಹೇಗೆ ಅಧ್ಯಕ್ಷ ಸ್ಥಾನ ಕೊಟ್ಟರೋ ಗೊತ್ತಿಲ್ಲ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ, ದಕ್ಷಿಣ ಕರ್ನಾಟಕದವರನ್ನು ಪರಿಗಣಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಮಹದಾಯಿ ನೀರು ಹಂಚಿಕೆ ಸಂಬಂಧ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಸಿಎಂ , ಸಂಸದರು ನಿಯೋಗ ತೆರಳಿ ಕೇಂದ್ರದ ಮೇಲೆ ಒತ್ತಡ ತರಬಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ, ಕರ್ನಾಟಕ ಸ್ವರ್ಗ ಆಗುತ್ತದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಕರ್ನಾಟಕ ಸ್ವರ್ಗ ಆಗಿದೆಯಾ ಎಂದು ಪ್ರಶ್ನಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭದ್ರತೆ ಕೊಡುವುದು ತಪ್ಪಲ್ಲ. ಟ್ರಂಪ್ ಗೆ ತೋರಿಸಲು ಬಿಜೆಪಿ ಬಳಿ ಏನೂ ಇಲ್ಲ. ಅವರು ಅಭಿವೃದ್ಧಿಯನ್ನೇ ಮಾಡಿಲ್ಲ. ಹೀಗಾಗಿ ತಾಜಮಹಲ್, ಸಾಬರಮತಿ ಆಶ್ರಮ ತೋರಿಸಿದ್ದಾರೆ ಎಂದರು.



