ಡಿವಿಜಿ ಸುದ್ದಿ, ಬೆಳಗಾವಿ: ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆದು ಆಳುವವರನ್ನು ದೆಹಲಿಯ ಮತದಾರರು ದೂರ ಇಟ್ಟಿದ್ದು, ಅವರ ತತ್ವ,ಸಿದ್ಧಾಂತಗಳಿಗೆ ಮನ್ನಣೆ ನೀಡಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕೇವಲ ಅಭಿವೃದ್ಧಿ ವಿಷಯ ಮಾತ್ರ ಮುಖ್ಯವಲ್ಲ. ಭಾವನಾತ್ಮಕ ವಿಷಯ ಪರಿಣಾಮ ಬೀರುತ್ತದೆ. ಯುವಕರಿಗೆ 2 ಕೋಟಿ ಉದ್ಯೋಗ ನೀಡುತ್ತೇನೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ, ಅಚ್ಛೇ ದಿನ್ ಬರುತ್ತೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮತದಾರನ್ನು ಸೆಳೆದು, ಎರಡು ಬಾರಿ ಪ್ರಧಾನಿಯಾಗಿದ್ದಾರೆ ಎಂದದರು.
ಗೆದ್ದೇ ಗೆಲ್ಲುತ್ತೇವೆಂದು ಬಿಜೆಪಿ ನಾಯಕರು, ಸಚಿವರು ನಡೆಸಿದ್ದ ಅಬ್ಬರದ ಪ್ರಚಾರಕ್ಕೆ ತಕ್ಕನಾದ ಜಯ ಸಿಲ್ಲಿಲ್ಲ.ನಾವು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ವಿ. ಯಶಸ್ಸು ಸಿಗಲಿಲ್ಲ. ಚುನಾವಣೆ ಎಂದ ಮೇಲೆ ಸೋಲು– ಗೆಲುವು ಸಾಮಾನ್ಯ ಪಕ್ಷದ ಸೋಲಿನ ಬಗ್ಗೆ ಚರ್ಚಿಸಿ, ಸರಿಪಡಿಸಲಾವುದು ಎಂದರು.
ಮೀಸಲಾತಿಯು ಮೂಲಭೂತ ಹಕ್ಕಲ್ಲ ಎಂದಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧವಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾತ್ಮ ಗಾಂಧಿ ಅವರ ಜೊತೆ ಚರ್ಚಿಸಿ, ಪೂನಾ ಒಪ್ಪಂದದ ಭಾಗವಾಗಿ ಮೀಸಲಾತಿ ನೀಡಿದ್ದಾರೆ. ಸಂವಿಧಾನದ 16ನೇ ವಿಧಿಯಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಉತ್ತರಾಖಂಡ ಪ್ರಕರಣದಲ್ಲಿ ತಪ್ಪಾಗಿ ತೀರ್ಪು ನೀಡಿದೆ.



