ಡಿವಿಜಿಸುದ್ದಿ, ಹಾಸನ: ಜಿಲ್ಲೆಯಲ್ಲಿ ಪೊಲೀಸರೇ ಸೈಟ್ ಮಾರಾಟಕ್ಕೆ ಇಳಿದಿ್ದು, ರಾಜ್ಯದ ಗೃಹ ಮಂತ್ರಿಗಳು ಪೊಲೀಸರನ್ನು ಸೈಟ್ ಮಾರಿ ದುಡ್ಡು ಮಾಡಲು ಬಿಟ್ಟಿದ್ದೀರಾ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರೈತರು 700 ಎಕರೆ ಜಮೀನು ಕೊಟ್ಟಿದ್ದಾರೆ. ಇದರಿಂದ ಸುಮಾರು 12 ಸಾವಿರ ನಿವೇಶನ ಆಗಲಿದೆ. ಜನರು ಕಡಿಮೆ ದರಕ್ಕೆ ಸೈಟ್ ಸಿಗುತ್ತೆ. ಜಮೀನು ಕೊಟ್ಟ ರೈತರಿಗೂ ಶೇ.50ರಷ್ಟು ಹಣ ದೊರೆಯಲಿದೆ ಎನ್ನುವ ಆಶಾ ಭಾವನೆಯಿಂದ ರೈತರು ಕೊಟ್ಟಿದ್ದರು. ಆದರೆ ಹಾಸನದಲ್ಲಿ ಹೌಸಿಂಗ್ ಬೋರ್ಡ್, ಪ್ರಾಧಿಕಾರಗಳಿಂದ ಕೆಲಸ ಆಗುತ್ತಿಲ್ಲ. ಖಾಸಗಿಯವರ ಸೈಟ್ ದಂಧೆ ಹೆಚ್ಚಾಗುತ್ತಿದೆ. ಅವರ ಜೊತೆ ಪೊಲೀಸರು ಕೂಡ ಸೈಟ್ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಈ ಕುರಿತು ಡಿಸಿ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಗಮನಕ್ಕೆ ತಂದಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ನಾನೇನಾದರೂ ಸಚಿವನಾಗಿದ್ರೆ ಅವನನ್ನು ಒದ್ದು ಒಳಗೆ ಹಾಕಿಸುತ್ತಿದ್ದೆ. ಪಿಡಿಓಗಳು ಕೂಡ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದ್ರು ಎನ್ಓಸಿ ಕೊಡ್ತಿದ್ದಾರೆ. ಹಾಸನದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಸರ್ಕಾರ ಖಾಸಗಿಯವರ ಜೊತೆ ಶಾಮೀಲಾದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



