ಡಿವಿಜಿ ಸುದ್ದಿ, ದಾವಣಗೆರೆ: ಕಾಂಗ್ರೆಸ್ ಪಕ್ಷದ ಮೂವರು ಪಾಲಿಕೆ ಸದಸ್ಯರು ಮತದಾನಕ್ಕೆ ಬರದಂತೆ ಬಿಜೆಪಿ ಹಣದ ಆಮೀಷವೊಡ್ಡಿ, ಕಿಡ್ನಾಪ್ ಮಾಡಿಸಿ ಅಧಿಕಾರ ಪಡೆದಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ಇಂದು ನಡೆದ ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತದಾನ ಬಹಿಷ್ಕರ ನಂತರ ಮಾತನಾಡಿದ ಅವರು, ನಾವೂ ಮೂವರು ವಿಧಾನ ಪರಿಷತ್ ಸದಸ್ಯರ ಹೆಸರು ನೀಡಿದ್ದೆವು. ಅಧಿಕಾರಿಗಳು ಸೇರಿಸಲಿಲ್ಲ. ಆದರೆ ಬಿಜೆಪಿಯವರ ಹೆಸರುಗಳನ್ನು ಆನಂತರವೂ ಸೇರಿಸಿದ್ದಾರೆ. ಚುನಾವಣಾಧಿಕಾರಿಗಳು ಬಿಜೆಪಿ ಏಜೆಂಟರ್ ರೀತಿ ಕೆಲಸ ಮಾಡಿದ್ಧಾರೆ. ಬಿಜೆಪಿ ಏಜೆಂಟ್ ರೀತಿ ಇರುವ ಅಧಿಕಾರಿಗಳನ್ನು ಇಟ್ಟುಕೊಂಡು ಬಿಜೆಪಿ ಚುನಾವಣೆಯಲ್ಲಿ ಗೆದ್ದಿದೆ. ಬಿಜೆಪಿಯವರು ಕಾಂಗ್ರೆಸ್ ನ ಮೂರು ಸದಸ್ಯರನ್ನು ಕಿಡ್ನಾಪ್ ಮಾಡಿಸಿ ಗೆಲುವು ಸಾಧಿಸಿದ್ದಾರೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಜನಾದೇಶ ಪಡೆಯದೇ ಅಧಿಕಾರ ಪಡೆದಿದ್ದಾರೆ. ಅದೇ ಮಾರ್ಗವನ್ನು ದಾವಣಗೆರೆ ಪಾಲಿಕೆಯಲ್ಲಿಯೂ ಅನುಸರಿಸಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಜನಾದೇಶವಿದ್ದರೂ, ಬಿಜೆಪಿ ಆಪರೇಷನ್ ಕಮಲದ ಮೂಲಕ ನಮ್ಮ ಪಕ್ಷದ ಮೂರು ಸದಸ್ಯರು ಮತದಾನಕ್ಕೆ ಗೈರು ಆಗುವಂತೆ ಮಾಡಿದ್ದಾರೆ. ಈ ಮೂವರಿಗೆ ಪಕ್ಷದಿಂದ ವಿಪ್ ಜಾರಿ ಮಾಡಿದ್ದರೂ, ಪಕ್ಷ ವಿರೋಧಿ ಕೃತ್ಯವೆಸಗಿದ್ದಾರೆ. ಈ ಕುರಿತು ಫೆ. 24 ರಂದು ಹೈ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾದ ಶ್ರೀನಿವಾಸ – ಶ್ವೇತಾ ದಂಪತಿ ಹಾಗೂ ಯಶೋದಾ ಉಮೇಶ್ ಗೈರು ಹಾಜರಾಗಿದ್ದರಿಂದ ಬಿಜೆಪಿ ಪಾಲಿಕೆ ಅಧಿಕಾರ ಹಿಡಿಯುವುದು ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಮತದಾನ ಬಹಿಷ್ಕರಿಸಿತು. ಪಾಲಿಕೆ ಸದಸ್ಯರು, ಶಾಸಕರು, ಎಂಎಲ್ಸಿಗಳು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರನ್ನು ಬಿಜೆಪಿ ಏಜೆಂಟರ್ ರೀತಿ ವರ್ತನೆ ಮಾಡುತ್ತಿದ್ದಾರೆಂದು ಮತದಾನ ಬಹಿಷ್ಕರಿಸಿದ್ದರು.



