ಡಿವಿಜಿ ಸುದ್ದಿ, ಚಿಕ್ಕಮಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರ ಯಾವ ಘಟ್ಟಕ್ಕೆ ಬೇಕಾದರೂ ತಲುಪಬಹುದು. ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಅವರಂತೆಯೇ ಸಿದ್ದರಾಮಯ್ಯ ಕೂಡಾ ಜನನಾಯಕ. ಅವರು ಇರಬೇಕಾದ ಪಕ್ಷ ಬಿಜೆಪಿ ಎಂದು ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಅಚ್ಚರಿಪಡಬೇಕಿಲ್ಲ. ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎಂದರು. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಮಾತಿದೆ. ಹಾಗೆಯೇ ಸಿದ್ದರಾಮಯ್ಯ ಅವರು ಬಿಜೆಪಿ ಹೊಗಳಲು ಸಾಧ್ಯವಿಲ್ಲ. ಅವರು ಬಿಜೆಪಿಗೆ ಬಂದಾಗಷ್ಟೇ ಹೊಗಳಬಹುದು ಎಂದರು.
ಕಾಂಗ್ರೆಸ್ ನಲ್ಲಿ ಇರುವಾಗ ಹೊಗಳಿದರೆ ಅವರ ರಾಜಕೀಯ ಅಧಿಕಾರಕ್ಕೆ ಧಕ್ಕೆ ಬರುತ್ತದೆ. ಆ ಸತ್ಯ ಅವರಿಗೂ ಗೊತ್ತಿದೆ. ಬಿಜೆಪಿಗೆ ಬಂದಾಗ ಖಂಡಿತಾ ಹೊಗಳುತ್ತಾರೆ ಎಂದು ತಿಳಿಸಿದರು.



