ಭೋಪಾಲ್: ಮಧ್ಯಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿದೆ. ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ನೀಡುವ ಮೂಲಕ ವಿಶ್ವಾಸಮತ ಯಾಚನೆಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನಗೊಂಡಂತಾಗಿದೆ.
ಒಟ್ಟು 230 ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ 22 ಶಾಸಕರ ರಾಜೀನಾಮೆಯಿಂದ ಸರ್ಕಾರ ಅಲ್ಪ ಮತಕ್ಕೆ ಕುಸಿದಿತ್ತು. ಈಗಿನ ಸದಸ್ಯರ 206ರಲ್ಲಿ ಕಾಂಗ್ರೆಸ್ – 92, ಬಿಜೆಪಿ – 107, ಪಕ್ಷೇತರರು –4, ಬಿಎಸ್ಪಿ – 2 ಸ್ಥಾನಗಳನ್ನು ಹೊಂದಿದೆ.
Kamal Nath has submitted his resignation to Madhya Pradesh Governor Lalji Tandon. His letter states "All that has happened in Madhya Pradesh in the last two weeks is a new chapter in the weakening of democratic principles." pic.twitter.com/agzKBsdbxh
— ANI (@ANI) March 20, 2020
ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ 22 ಶಾಸಕರು ರಾಜೀನಾಮೆ ನೀಡಿದ್ದರು. 16 ಬಂಡಾಯ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ವಿಧಾನಸಭೆ ಸ್ಪೀಕರ್ ಎನ್.ಪಿ. ಪ್ರಜಾಪತಿ ಅವರು ಇಂದು ಬೆಳಿಗ್ಗೆ ಘೋಷಿಸಿದ್ದರು. ಇದರೊಂದಿಗೆ ಪಕ್ಷದ ಒಟ್ಟು 22 ಶಾಸಕರ ರಾಜೀನಾಮೆ ಅಂಗೀಕಾರವಾದಂತಾಯಿತು. ಹೀಗಾಗಿ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದ ಪರಿಣಾಮ ರಾಜೀನಾಮೆ ನೀಡಿದರು.
ಶುಕ್ರವಾರ ಸಂಜೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ ಸೂಚಿಸಿತ್ತು. ಅದರೆ, ಕಮಲ್ ನಾಥ್ ವಿಶ್ವಾಸ ಮತಯಾಚನೆಗೆ ಮುನ್ನವೇ ರಾಜೀನಾಮೆ ನೀಡಿದ್ದಾರೆ. ರಾಜಿನಾಮೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲ್ ನಾಥ್ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಮ್ಮ ಸರ್ಕಾರ ವಿರುದ್ಧ ಸಂಚು ರೂಪಿಸಿದೆ. ಇದೊಂದು ಮಧ್ಯಪ್ರದೇಶದ ಜನರಿಗೆ ದ್ರೋಹ ಬಗೆದಂತಾಗಿದೆ. ಕಳೆದ 15 ತಿಂಗಳುಗಳಲ್ಲಿ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ. ಬಿಜೆಪಿಗೆ 15 ವರ್ಷಗಳು ದೊರೆತಿದ್ದವು, ಆದರೆ ನನಗೆ 15 ತಿಂಗಳುಗಳಷ್ಟೇ ದೊರೆತವು. ಈ ಅವಧಿಯಲ್ಲಿ ಬಿಜೆಪಿ ಹೂಡಿದ ಸಂಚು ಏನೆಂಬುದು ಮಧ್ಯಪ್ರದೇಶದ ಜನತೆಗೆ ತಿಳಿದಿದೆ ಎಂದರು.
ಮಧ್ಯಪ್ರದೇಶ ಜನ ಎಲ್ಲವನ್ನೂ ಗಮನಿಸುತ್ತಿದದ್ದು, ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಮ್ಮ ಕೆಲಸಕ್ಕೆ ಜನರೇ ನ್ಯಾಯ ಒದಗಿಸಿಕೊಡಲಿದ್ದಾರೆ ಎಂದರು.



