ನವದೆಹಲಿ: ದೇಶದ್ಯಾಂತ ಬಂದ್ ಆಗಿರುವ ಶಾಲೆ ಕಾಲೇಜುಗಳು ಆಗಸ್ಟ್ ಬಳಿಕವಷ್ಟೇ ಪುನಾರಂಭಗೊಳ್ಳಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಅವರು ಶಾಲೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ದೇಶದಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ವಿದ್ಯಾರ್ಥಿಗಳು, ಶಿಕ್ಷಕರು ಇತರೆ ಸಿಬ್ಬಂದಿಗಳಿಂದ ಪ್ರತ್ಯೇಕ ಮೂರು ಮಾರ್ಗಸೂಚಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶದಾದ್ಯಂತ ಲಾಕ್ ಡೌನ್ ಸಡಿಲಿಕೆ ನಂತರ ದೇಶದಲ್ಲಿ ಶಾಲೆ ಕಾಲೇಜು ಪುನಾರಂಭಗೊಳ್ಳುವ ಮಾತುಗಳು ಕೇಳಿ ಬಂದಿತ್ತು. ಶಾಲೆ ಕಾಲೇಜುಗಳು ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಶಾಲೆ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಸದ್ಯ ಅನುಮತಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.
ಸಿಬಿಎಸ್ಸಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪಿಯುಸಿ ಹಾಗೂ ಡಿಪ್ಲೋಮಾ, ಪದವಿ ಪರೀಕ್ಷೆಗಳು ಬಾಕಿ ಉಳಿದುಕೊಂಡಿದ್ದು ಆಗಸ್ಟ್ ಅಂತ್ಯದ ವೇಳೆಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯತ್ನ ಮಾಡಲಿದ್ದೇವೆ. ಆಗಸ್ಟ್ ಬಳಿಕ ಪರಿಸ್ಥಿತಿ ಅನುಸರಿಸಿ ಶಾಲೆ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದರು.



