ನವದೆಹಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆಯ ವಿಚಾರವಾಗಿ ಜಾಮಿಯಾ ವಿವಿಯಲ್ಲಿ ಪಿಹೆಚ್ಡಿ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವಿದ್ಯಾರ್ಥ ಮಿರಾನ್ ಹೈದರ್ ಎಂದು ಗುರುತಿಲಾಗಿದ್ದು, ಈತ ಲಾಆರ್.ಜೆ.ಡಿ ದೆಹಲಿ ಯುವ ವಿಭಾಗದ ಮುಖ್ಯಸ್ಥ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ ಎಂಬ ಆರೋಪ ಮೇಲೆ ಬಂಧಿಸಲಾಗಿದೆ.
ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸತತ ನಾಲ್ಕು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಈ ಗಲಭೆಯಲ್ಲಿ 54 ಜನರು ಸಾವನ್ನಪ್ಪಿದ್ದರು. ಗಲಭೆಯಲ್ಲಿ ಸಾವಿರಾರು ಜನರಿಗೆ ಗಾಯವಾಗಿತ್ತು.
ಪೌರತ್ವ ವಿರೋಧಿ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ದೊಡ್ಡ ಮಟ್ಟದ ಘರ್ಷಣೆಯಾಗಿತ್ತು. ಇದರಲ್ಲಿ ಕೆಲವು ಪ್ರತಿಭಟನಾಕಾರರು ಬಂದೂಕು ಹಿಡಿದು ದಾಳಿ ಕೂಡ ಮಾಡಿದ್ದರು. ಜೊತೆಗೆ ಅನೇಕ ಪ್ರತಿಭಟನಾಕಾರರು ಗುಂಡೇಟಿನಿಂದ ಗಾಯಗೊಂಡಿದ್ದರು.
ಈಗಾಗಲೇ ಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಂಡ ಎಎಪಿ ನಾಯಕ ತಾಹೀರ್ ಹುಸೇನ್ ಮತ್ತು ಆತನ ಸಹೋದರ ಸೇರಿದಂತೆ 7 ಜನರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು.



