ನವದೆಹಲಿ: ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಲಾಕ್ಡೌನ್ ಪರಿಹಾರವಲ್ಲ. ಲಾಕ್ ಡೌನ್ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು. ಆದರೆ, ಸಂಪೂರ್ಣ ತೊಲಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ವಿಡಿಯೋ ಆಪ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಟೆಸ್ಟಿಂಗ್ ಪ್ರಮಾಣವನ್ನು ಯೋಜಿತ ರೀತಿಯಲ್ಲಿ ನಡೆಸಬೇಕ. ಕೊರೊನಾ ವೈರಾಣುವನ್ನು ಲಾಕ್ಡೌನ್ ಮಣಿಸುತ್ತದೆ ಎಂದುಕೊಳಳಲಾಗದು. ಲಾಕ್ಡೌನ್ನಿಂದ ವೈರಾಣು ಹರಡುವುದನ್ನು ಒಂದಿಷ್ಟು ನಿಯಂತ್ರಿಸಬಹುದಷ್ಟೇ. ಹೀಗಾಗಿ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಿ, ಸೋಂಕಿತರಿಗೆ ಚಿಕಿತ್ಸೆಗೆ ನೀಡುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಈಗಿನ ಸನ್ನಿವೇಶ ಗಮನಿಸಿದರೆ ಲಾಕ್ ಡೌನ್ ನಿಂದ ಮಹಾ ಪಿಡುಗಿನ ಯಥಾ ಸ್ಥಿತಿ ಖಂಡಿತ ಆಗುವುದಿಲ್ಲ.ಪ್ರಸ್ತುತ ದೇಶದಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿ ಟೆಸ್ಟಿಂಗ್ಗಳು ನಡೆಯುತ್ತಿವೆ. ಈ ಪ್ರಮಾಣವನ್ನು ದೊಡ್ಡಮಟ್ಟದಲ್ಲಿ ಹೆಚ್ಚಿಸಬೇಕಿದೆ.
ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆರ್ಥಿಕ ಸಮಸ್ಯೆಗಳ ನಿರ್ವಹಣೆಗೆ ಒಂದು ಯೋಜನೆ ರೂಪಿಸಬೇಕು. ಬಡವರಿಗೆ ಅಗತ್ಯ ವಸ್ತುಗಳು ಕೈಗೆ ಸಿಗುವಂತೆ ಆಗಬೇಕು. ಪ್ರಧಾನಿಯೊಂದಿಗೆ ನನಗೆ ಹಲವು ವಿಚಾರಗಳ ಬಗ್ಗೆ ಭಿನ್ನಮತವಿದೆ. ಆದರೆ ಭಿನ್ನಮತದ ಬಗ್ಗೆ ಚರ್ಚಿಸಲು ಇದು ಸಮಯವಲ್ಲ. ನಾವೆಲ್ಲರೂ ಒಂದಾಗಿ ಮಹಾಪಿಡುಗಿನ ವಿರುದ್ಧ ಹೋರಾಡಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜೊತೆಗೆ ವಿವರಣಾತ್ಮಕ ಸಂವಾದ ನಡೆಸಬೇಕು. ಆದರೆ ಅವರ ಕಾರ್ಯವೈಖರಿಯೇ ವಿಭಿನ್ನವಾಗಿದೆ. ಈ ಹಿಂದೆ ಏನಾಯಿತು ಎಂಬುದನ್ನು ನಾನು ವಿಮರ್ಶಿಸುವುದಿಲ್ಲ. ನಾವು ಪರಸ್ಪರ ಬೈದಾಡಿಕೊಳ್ಳದೆ. ಒಂದಾಗಿ ಕೊರೊನಾ ವೈರಸ್ ವಿರುದ್ಧ ಶ್ರಮಿಸೋಣ. ನಮ್ಮ ಸಂಪನ್ಮೂಲವನ್ನು ರಾಜ್ಯಗಳು ಮತ್ತು ಜಿಲ್ಲಾಡಳಿತಕ್ಕೆ ತಲುಪಿಸೋಣ ಎಂದರು.



