ಡಿವಿಜಿ ಸುದ್ದಿ, ಚಿಕ್ಕಮಗಳೂರು: ನಿನ್ನೆಯ ಬಾಂಬ್ ಪತ್ತೆ ಪ್ರಕರಣ ಸಂಶಯಕ್ಕೆ ಎಡೆಮಾಡಿಕೊಡುವ ವಾತಾವರಣದಂತೆ ಇದ್ದು, ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಣುಕು ಪ್ರದರ್ಶನದಂತೆ ಕಾಣಿಸಿತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
ಜಿಲ್ಲೆಯ ಶೃಂಗೇರಿಗೆ ಚಂಡಿಕಾಯಾಗದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇವತ್ತಿನ ಬೆಳವಣಿಗೆ ಏನು, ಮಂಗಳೂರು ಕಮಿಷನರ್ ಹರ್ಷ ಅವರು ಇವತ್ತೇನಾದರೂ ಬಾಂಬ್ ಹಾಕಿಸಿದ್ರಾ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಅಧಿಕಾರಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸಬೇಕು. ಯಾರ ಮುಲಾಜಿಗೊಳಗಾಗದಂತೆ ಕರ್ತವ್ಯ ನಿರ್ವಹಿಸಬೇಕು. 14 ತಿಂಗಳು ಮೈತ್ರಿ ಸರ್ಕಾರ ಇದ್ದಾಗ ಈ ರೀತಿಯ ಪ್ರಕರಣಗಳು ಆಗಿರಲಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಅಶಾಂತಿ ವಾತಾವರಣ ಉಂಟಾಗುತ್ತಿದೆ. ಎಲ್ಲರೂ ಸೌಹಾರ್ದಯುತವಾಗಿ ಬಾಳುವ ವಾತಾವರಣ ನಿರ್ಮಾಣ ಮಾಡಬೇಕಿರುವುದು ಸರ್ಕಾರದ ಕರ್ತವ್ಯ ಎಂದರು.
ನಿರ್ಜನ ಪ್ರದೇಶಕ್ಕೆ ಬಾಂಬ್ ತಗೆದುಕೊಂಡು ಹೋಗಿ ಸ್ಫೋಟಿಸಿರುವ ಪ್ರಕರಣಗಳು ಕಡಿಮೆ. ಮಾಧ್ಯಮಗಳಲ್ಲಿ ನಿನ್ನೆ ಸ್ಫೋಟ ಚಿತ್ರಣ ನೋಡಿದಾಗ ಬರಿ ಹೊಗೆ ಕಾಣಿಸುತ್ತಿತ್ತು. ಈ ರೀತಿ ಜನರನ್ನು ಭಯಭೀತರಾಗಿಸಬಾರದು. ಕರಾವಳಿಯ ಆರ್ಥಿಕ ಬೆಳವಣಿಗೆ ಕುಂಠಿತಗೊಳಿಸಿದ್ದು, ಜನರ ಜತೆ ಹುಡುಗಾಟ ಆಡದೆ ಸತ್ಯಾಂಶ ಹೇಳಿ ಎಂದರು.



