ಡಿವಿಜಿ ಸುದ್ದಿ, ಮಂಡ್ಯ: ಅರ್ಕೇಶ್ವರ ದೇವಸ್ಥಾನದ ಮೂವರು ಅರ್ಚಕರನ್ನು ಬರ್ಬರಾಗಿ ಹತ್ಯೆ ಮಾಡಿದ ಮೂವರು ಹಂತಕರ ಮೇಲೆ ಪೊಲೀಸರು ಇಂದು ಬೆಳಗ್ಗೆ ಶೂಟ್ಔಟ್ ಮಾಡಿದ್ದಾರೆ.
ಬೆಳಗ್ಗೆ ಮದ್ದೂರು ಮಳವಳ್ಳಿ ರಸ್ತೆಯ ಸಾದೊಹಳ್ಳಿ ಗೇಟ್ ಬಳಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಆಂಧ್ರ ಮೂಲದ ವಿಜಿ (25), ಮದ್ದೂರಿನ ಅರೆಕಲ್ ದೊಡ್ಡಿಯ ಗಾಂಧಿ (28) ಮತ್ತು ತೊಪ್ಪನಹಳ್ಳಿಯ ಮಂಜು (30) ಎಂದು ಗುರುತಿಸಲಾಗಿದೆ. ಶೂಟ್ಔಟ್ನಲ್ಲಿ ಹಂತಕರಿಗೆ ಗಂಭೀರ ಗಾಯಗಳಾಗಿವೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಹಂತಕರು ಪೊಲೀಸರ ಮೇಲೆ ಚಾಕು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಆಗ ಐಪಿಎಸ್ ಶರತ್ಕುಮಾರ್ ಹಾಗೂ ಓರ್ವ ಪೇದೆಗೆ ಗಾಯಗಳಾಗಿವೆ. ಹೀಗಾಗಿ ಪೊಲೀಸರು ತಮ್ಮ ರಕ್ಷಣೆಗಾಗಿ ಎದುರಿನಲ್ಲಿದ್ದ ಮೂವರು ಹಂತಕರ ಮೇಲೆ ಗುಂಡು ಹಾರಿಸಿದ್ದಾರೆ.
ಈ ವೇಳೆ ಹಂತರಿಗೆ ಗಾಯಗಳಾಗಿವೆ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಹಂತಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಶುಕ್ರವಾರ ಮಂಡ್ಯದ ಅರ್ಕೇಶ್ವರ ದೇವಸ್ಥಾನಕ್ಕೆ ನುಗ್ಗಿ ಮೂವರು ಅರ್ಚಕರನ್ನು ಬರ್ಬರವಾಗಿ ಕೊಂದು ದೇವಸ್ಥಾನದ ಹುಂಡಿಯನ್ನು ದರೋಡೆ ಮಾಡಿ ಈ ಹಂತಕರು ಪರಾರಿಯಾಗಿದ್ದರು. ಹಂತಕರ ಸೆರೆಗಾಗಿ ಪೊಲೀಸ್ ಇಲಾಖೆ ನಾಲ್ಕು ತಂಡವನ್ನು ರಚನೆ ಮಾಡಲಾಗಿತ್ತು.

ಸೆಪ್ಟೆಂಬರ್ 11 ರಂದು ಮಂಡ್ಯ ಜಿಲ್ಲೆಯ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದ ಆವರಣದಲ್ಲೇ ಕೊಲೆ ನಡೆದಿತ್ತು. ಮಲಗಿದ್ದ ಮೂವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಜೊತೆಗೆ ಹುಂಡಿ ಹೊತ್ತೊಯ್ದು ದೇವಾಲಯದ ಹೊರಗೆ ಬೀಸಾಡಿದ್ದರು.
ಕೊಲೆಯಾದ ಮೂವರನ್ನು ಗಣೇಶ್, ಪ್ರಕಾಶ್ ಮತ್ತು ಆನಂದ್ ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ದೇವಸ್ಥಾನದಲ್ಲಿ ಅರ್ಚಕರಾಗಿಯೂ ಮತ್ತು ಸೆಕ್ಯೂರಿಟಿಯಾಗಿಯೂ ಕೆಲಸ ಮಾಡುತ್ತಿದ್ದರು.ಸರ್ಕಾರ ಹತ್ಯೆಯಾದ ಮೂವರು ಅರ್ಚಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ.



