ಡಿವಿಜಿ ಸುದ್ದಿ, ಹರಿಹರ: ಕಾಗಿನೆಲೆ ಶಾಖಾ ಮಠ ಹೊಸದುರ್ಗದ ಶ್ರೀ ಈಶ್ವರನಂದಪುರಿ ಸ್ವಾಮೀಜಿ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದಸಚಿವ ಮಾಧುಸ್ವಾಮಿ ಶ್ರೀಗಳ ಕ್ಷಮೆ ಕೇಳಿದರು.
ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಕಾಗಿನೆಲೆ ಮಹಾಸಂಸ್ಥಾನದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ಗೃಹ ಸಚಿವ ಎಸ್. ಆರ್ . ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಕ್ಷಮೆ ಕೋರಿದರು. ಕುರುಬ ಸಮಾಜದ ಬಂಧುಗಳು ಪ್ರತಿಭಟನೆ ಮಾಡದಂತೆ ಶ್ರೀಗಳು ಆದೇಶಿಸಿದರು.
ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಗೃಹ ಮಂತ್ರಿ ಎಸ್.ಆರ್. ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಮಾಧುಸ್ವಾಮಿ ನಡೆದ ಘಟನೆ ವಿವರಿಸಿದರು. ಅವರ ಕಣ್ಣುಗಳಲ್ಲಿ ನನಗೆ ಸತ್ಯಾಂಶ ಗೊತ್ತಾಯ್ತು. ಕನಕದಾಸರ ವೃತ್ತದಲ್ಲಿ ಬೋರ್ಡ್ ಹಾಕಲು ಸಚಿವರು ಒಪ್ಪಿಗೆ ನೀಡಿದ್ದಾರೆ. ನಮಗೂ ಯಾರ ಮನಸ್ಸು ನೋಯಿಸುವ ಉದ್ದೇಶ ಇರಲಿಲ್ಲ. ಹುಳಿಯಾರು ಸಮಸ್ಯೆ ಬಗೆಹರಿದಿದೆ. ಈ ವಿಚಾರಕ್ಕೆ ಯಾರೂ ಮಾತನಾಡಬಾರದು ಎಂದು ಹೇಳಿದರು.
ಹೊಸದುರ್ಗದ ಶ್ರೀ ಈಶ್ವರನಂದಪುರಿ ಸ್ವಾಮೀಜಿ ಮಾತನಾಡಿ , ಮಾಹಿತಿ ಕೊರತೆಯಿಂದ ಹುಳಿಯಾರುನಲ್ಲಿ ಗೊಂದಲ ಏರ್ಪಟ್ಟಿತ್ತು. ಕನಕದಾಸರ ವೃತ್ತ ನಿರ್ಮಾಣ ಮಾಡಲು ಸಚಿವ ಮಧುಸ್ವಾಮಿ ಅವರು ತೀರ್ಮಾನ ಮಾಡಿದ್ದಾರೆ.ಈ ವಿವಾದ ಇಲ್ಲಿಗೆ ಕೈ ಬಿಡಬೇಕು ಎಂದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಹುಳಿಯಾರು ವೃತ್ತದ ವಿಚಾರವನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಗುರುಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಹೊಸದುರ್ಗದ ಸ್ವಾಮೀಜಿಗಳು ಬಗ್ಗೆ ಗೊಂದಲ ಹೇಳಿಕೆ ವಿಚಾರವಾಗಿ ಮಾಹಿತಿ ಕೊರತೆಯಾಗಿತ್ತು. ಸದ್ಯಕ್ಕೆ ಕನಕ ವೃತ್ತ ಮಾಡಲು ತಾತ್ಕಾಲಿಕವಾಗಿ ಬೋರ್ಡ್ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಕಾನೂನು ರೀತಿಯಲ್ಲಿ ವೃತ್ತಕ್ಕೆ ನಾಮಫಲಕ ಅಳವಡಿಸಲಾಗುವುದು ಎಂದು ಹೇಳಿದ್ಧಾರೆ.
ಸಚಿವ ಮಾಧುಸ್ವಾಮಿ ಮಾತನಾಡಿ, ಕನಕ ವೃತ್ತಕ್ಕೆ ಹೆಸರಿಡಲು ಸಮ್ಮತಿ ಸೂಚಿಸಲಾಗಿದೆ. ಸ್ವಾಮೀಜಿಗಳಿಗೆ ನಾನು ಯಾವುದೇ ಅವಮಾನ ಮಾಡಿಲ್ಲ. ಕೆಲವರು ನಾನು ಏಕ ವಚನದಲ್ಲಿ ಮಾತಾಡಿದ್ದೇನೆ ಎಂದು ಹಲವರು ಹೇಳಿದ್ದಾರೆ. ಸ್ವಾಮೀಜಿಗಳ ನೇತೃತ್ವದಲ್ಲಿ ಮಾತನಾಡಿದ್ದಕ್ಕೆ ನನ್ನ ಮನಸ್ಸಿಗೆ ಸಮಾಧಾನ ತಂದಿದೆ ಎಂದ್ರು.