ಡಿವಿಜಿ ಸುದ್ದಿ, ಚಿತ್ರದುರ್ಗ: ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರು ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವರಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯೂ ಇಲ್ಲ, ಜನರ ಪ್ರಾಣ ರಕ್ಷಣೆಯೂ ಇಲ್ಲ ಎಂದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಲಂಚಕೋರ, ಭ್ರಷ್ಟ. ಆತನಿಂದ ಅಭಿವೃದ್ಧಿಯೂ ಇಲ್ಲ, ಜನಗಳ ಪ್ರಾಣ ರಕ್ಷಣೆಯೂ ಇಲ್ಲ ಎಂದು ಕಿಡಿಕಾರಿದ್ದಾರೆ. ಶ್ರೀರಾಮುಲು ಮತ್ತು ಅವರ ಪಿಎಗಳಿಗೆ ಸುಲಿಗೆ ಮಾತ್ರ ಗೊತ್ತಿದೆ ಎಂದರು.
ಬಳ್ಳಾರಿಯಲ್ಲಿ ಒಂದೇ ಗುಂಡಿಯಲ್ಲಿ 8 ಜನರನ್ನು ಹೂಳಲಾಗಿದೆ. ಶ್ರೀರಾಮುಲು ತವರು ಜಿಲ್ಲೆಯಲ್ಲಿ ನಡೆದ ಕೃತ್ಯ ನಾಚಿಕೆ ಆಗಬೇಕು. ಪರಶುರಾಂಪುರದಲ್ಲಿ ಶ್ರೀರಾಮುಲು ಸಾವಿರಾರು ಜನರ ಜೊತೆ ಮೆರವಣಿಗೆ ಮಾಡಿದ್ದಾರೆ. ಆದರೂ ಸಚಿವರ ವಿರುದ್ಧ ಡಿಸಿ, ಎಸ್ಪಿ ಯಾವುದೇ ದೂರು ದಾಖಲಿಸಿಲ್ಲ.
ಪುತ್ರನ ಮದುವೆ ಮಾಡಿದ ಹೊಸದುರ್ಗದ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ವಿರುದ್ಧ ಕೇಸು ದಾಖಲಿಸಿದ್ದಾರೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.



