ಡಿವಿಜಿ ಸುದ್ದಿ, ಹರಿಹರ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರಿನ ಸೋನಿಯಾ ಗಾಂಧಿ ಬ್ರಿಗೇಡ್ ಗೆ ಹರಿಹರದಲ್ಲಿ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ್ ಚಾಲನೆ ನೀಡಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ರಿಗೇಡ್ ಜಿಲ್ಲಾ ಕಾರ್ಯಕಾರಿಣಿ ಸಭೆ, ಕನ್ನಡ ರಾಜ್ಯೋತ್ಸವ ಹಾಗೂ ಜವಹರಲಾಲ್ ನೆಹರು ಜಯಂತಿ ಆಚರಿಸಲಾಯಿತು. ಕಾಂಗ್ರೆಸ್ ಪಕ್ಷ ನೆಹರೂ ಕುಟುಂಬದ ಹಿಡಿತದಲ್ಲಿದೆ ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ, ನೆಹರೂ ಕುಟುಂಬವು ತ್ಯಾಗ ಮತ್ತು ಬಲಿದಾನಕ್ಕೆ ಹೆಸರಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀ ನಾರಾಯಣ್ ಹೇಳಿದರು

ನೆಹರೂ ಕುಟುಂಬದ ಇಂದಿರಾಗಾಂಧಿ ರಾಜೀವ್ ಗಾಂಧಿಯವರು ಬಲಿದಾನಕ್ಕೆ ಹೆಸರಾದರೆ, ನಮ್ಮ ನಾಯಕಿ ಸೋನಿಯಾ ಗಾಂಧಿಯವರು ತ್ಯಾಗಕ್ಕೆ ಹೆಸರಾಗಿದ್ದಾರೆ.ಸೋನಿಯಾಜಿ ಅವರು ತಮಗೆ ಒಲಿದು ಬಂದ ಪ್ರಧಾನಮಂತ್ರಿ ಸ್ಥಾನವನ್ನು ಮನಮೋಹನ್ ಸಿಂಗ್ ಅವರಿಗೆ ದೇಶದ ಅಭಿವೃದ್ಧಿ ಸಲುವಾಗಿ ತ್ಯಾಗ ಮಾಡಿದ್ದನ್ನು ಎಲ್ಲರೂ ಸ್ಮರಿಸಬೇಕು ಎಂದರು.
ಇಂತಹ ಮಹಾನ್ ನಾಯಕಿಯ ಹೆಸರಿನಲ್ಲಿ ಪ್ರಾರಂಭವಾಗಿರುವ ಬ್ರಿಗೇಡ್ನವರು ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗಬೇಕು ಯಾರನ್ನು ಮೆಚ್ಚಿಸಲಿಕ್ಕೆ ಮಾಡಿದರೆ ಅದು ನಾಟಕೀಯ ವಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಅವರು ಪಕ್ಷ ಅನೇಕ ವರ್ಷಗಳಿಂದ ನಡೆದು ಬಂದ ದಾರಿಯನ್ನು ನಾವು ನೋಡಬೇಕಾಗುತ್ತದೆ.
ಶಾಸಕ ಎಸ್ ರಾಮಪ್ಪ ಮಾತನಾಡಿ, ಜವಾಹರಲಾಲ್ ನೆಹರೂ ರವರು ತಮ್ಮ ಜಯಂತಿಯನ್ನು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ಆಚರಿಸಲು ತಿಳಿಸಿದ್ದಾರೆ.ಇಂದಿರಾ ಗಾಂಧಿಯವರು ಸಹ ವಿಶ್ವದಲ್ಲಿಯೇ ಉಕ್ಕಿನ ಮಹಿಳೆ ಎಂಬ ಹೆಸರು ಗಳಿಸಿದ್ದಾರೆ. ವಿರೋಧ ಪಕ್ಷದವರು ಇಂದಿನ ಯುವ ಸಮೂಹವನ್ನು ರಾಮನವಮಿ, ಹನುಮ ಜಯಂತಿ ಎಂಬ ಹೆಸರಿನಿಂದ ತಮ್ಮತ್ತ ಸೆಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷದಿಂದಲೂ ಸಹ ಮುಂದಿನ ದಿನಗಳಲ್ಲಿ ರಾಮ ಜಯಂತಿ, ಹನುಮ ಜಯಂತಿಯಂತಹ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದಿಂದ ಆಚರಿಸುವಂತಾಗಬೇಕು. ಈ ವಿಷಯವಾಗಿ ನಾನು ಹೈಕಮಾಂಡ್ನೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಂಕರ್ ಖಟಾವಕರ್, ಬಿ. ರೇವಣಸಿದ್ದಪ್ಪ, ನಲ್ಕುಂದ ಹಾಲೇಶಪ್ಪ, ಹನಗವಾಡಿ ಹನುಮಂತಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ಆನಂದಪ್ಪ ಜಿಗಳಿ, ಬಾಬಣ್ಣ, ಅಭಿದಾಲಿ, ಡಿ.ಕುಮಾರ್, ಹೊನ್ನಾಳ್ಳಿ ಹುಮ್ಮಣ್ಣ, ರಮೇಶ್, ಎಪಿಎಂಸಿ ನಿರ್ದೇಶಕ ಮಂಜುನಾಥ್ ಪಟೇಲ್, ಸಿ.ಎನ್.ಹುಲಿಗೇಶ್, ಬಾಬುಲಾಲ್, ಭಾಷಾ,ಸೋನಿಯಾ ಗಾಂಧಿ ಬ್ರಿಗೇಡ್ ಮೀಡಿಯಾ ಅಧ್ಯಕ್ಷ ರಮೇಶ್ ಮುಂಗಾರು ಮುಂತಾದವರು ಉಪಸ್ಥಿತರಿದ್ದರು.



