ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ 1ನೇ ವಾರ್ಡಿನಲ್ಲಿ ಕುಡಿಯುವ ನೀರು ಯೋಗ್ಯವಾಗಿಲ್ಲ. ಈ ನೀರನ್ನು ಕುಡಿದರೆ ಚರ್ಮ ರೋಗ, ಮೈ ತುರಿಕೆ, ಮಕ್ಕಳಿಗೂ ಸಹ ಕಾಯಿಲೆಗಳು ಬಂದಿವೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಸೋಮವಾರ ಪ್ರತಿಭಟನೆ ನಡೆಸಿದರು.
ವೈದ್ಯರ ಬಳಿ ಹೋದರೆ ಈ ಸಮಸ್ಸೆಗಳು ನೀವು ಬಳಸುವ ನೀರಿನಿಂದ ಬಂದಿದೆ. ಅಂತಹ ನೀರನ್ನು ಬಳಸಿದರೆ ಆರೋಗ್ಯಕ್ಕೆ ಗಂಭೀರ ಕಾಯಿಲೆಗಳು ಬರುತ್ತವೆ ಎಂದು ಹೇಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ 1ನೇ ವಾರ್ಡಿನ ಮಹಿಳೆಯರು, ಪುರುಷರು ಮಾತ್ರವಲ್ಲದೇ ವಯಸ್ಸಾದ ಅಜ್ಜಿoದಿರು ಗ್ರಾಮ ಪಂಚಾಯಿತಿಗೆ ಖಾಲಿ ಕೊಡಗಳೊಂದಿಗೆ ಬಂದು ಪ್ರತಿಭಟಿಸಿ ಗ್ರಾಮ ಪಂಚಾಯಿತಿ ವಿರುದ್ಧ ಧಿಕ್ಕಾರ ಕೂಗಿದರು.
ನಮ್ಮ ವಾರ್ಡಿನಲ್ಲಿ ಬಹಳ ದಿನಗಳಿಂದ ಕಲುಷಿತ ನೀರು ಬಳಸಿದ್ದರಿಂದ ಅನೇಕ ಕಾಯಿಲೆಗಳು ಬಂದಿವೆ. ಎಷ್ಟು ಅನೇಕ ಸಲ ಪಂಚಾಯತಿಗೆ, ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ನೀರಿನ ಸಮಸ್ಯೆ ಬಗೆಹರಿದಿಲ್ಲ. ಕಾರಣ ಗ್ರಾಮ ಪಂಚಾಯಿತಿಗೆ ನಮ್ಮ ವಾರ್ಡಿನ ಸದಸ್ಯರು ಬಂದು ಪ್ರತಿಭಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಎಂದು ವಾರ್ಡಿನ ಮುಖಂಡ ಐನಳ್ಳಿ ಸಲಾಂಸಾಬ್ ಎಚ್ಚರಿಕೆ ನೀಡಿದರು.
ಶುದ್ಧ ನೀರು ಸರಬರಾಜು ಮಾಡುವವವರೆಗೂ ಪ್ರತಿಭಟನೆ ಕೂರುತ್ತೇವೆ, ಜಾಗ ಬಿಟ್ಟು ಏಳುವುದಿಲ್ಲ ಪಣತೊಟ್ಟರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಹುಸೇನ್ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕೂಡಲೇ 2-3 ದಿನಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇವೆಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು.
ವಾರ್ಡಿನ ಅಜೀಮ್ ಸಾಹೇಬ್, ರಹಮತ್ ವುಲ್ಲ, ಸುಭಾನ್ ಸಾಬ್, ಶಿವಾಜಿ, ಅಬ್ದುಲ್, ಮುನಾಫ್ ಸಾಬ್, ಹಿಮಾಮ್ ಹುಸೇನ್, ಕೆಂಚಮ್ಮ, ಪರ್ವೀನ್ ಬಾನ್, ರೇಣುಕಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.