ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಐತಿಹಾಸಿಕ ದಂಡಿನ ದುರುಗಮ್ಮದೇವಿ ಕಾರ್ತಿಕೋತ್ಸವದ ಅಂಗವಾಗಿ ನಡೆಯುವ ಜಾತ್ರೋತ್ಸವದಲ್ಲಿ ಪ್ರಾಣಿಬಲಿ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 8 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರಪ್ಪ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಗ್ರಾ.ಪಂ ಆವರಣದಲ್ಲಿ ದಂಡಿ ದುರ್ಗಮ್ಮ ಜಾತ್ರೆಯ ಅಂಗವಾಗಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ಜಾತ್ರೆಯಲ್ಲಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಜಾತ್ರೆಗೆ ಆಗಮಿಸುವ ಭಕ್ತರ ಜೇಬು ಕಳ್ಳತನ, ಮೊಬೈಲ್ ಕಳ್ಳತನ ನಡೆದಿರುವುದು ಬೆಳೆಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಜನಸಂದಣಿ, ಸೂಕ್ಮ ಪ್ರದೇಶಗಳಿಗೆ ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಿ, ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಡಿ.20 ರಿಂದ 23 ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವುದರಿಂದ ಕುಡಿಯುವ ನೀರು ಪೂರೈಕೆಗೆ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ, ಗ್ರಾಮದ ಎಲ್ಲಾ ಬೀದಿಗಳಲ್ಲಿ ವಿದ್ಯುತ್ ಸಂಪರ್ಕ, ಬಿಸಿಲು ತಾಪಮಾನ ಹೆಚ್ಚಿದಂತೆ ಅರೋಗ್ಯ ಮೇಲೆ ದುಷ್ಪರಿಣಾಮ ಬೀರದಂತೆ ಹೆಚ್ಚುವರಿ ಆಂಬ್ಯುಲೆನ್ಸ್, ಔಷಧಿ ಸಾಮಗ್ರಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.
ಆ.21ರಂದು ಜಾತ್ರೆಯ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯ ಕ್ರಮಕ್ಕೆ ಕಿರುತರೆ ವಾಹಿನಿಯ ಕನ್ನಡ ಕೋಗಿಲೆ, ಕಾಮಿಡಿ ಕಿಲಾಡಿ ಪ್ರಖ್ಯಾತ ಕಲಾವಿದರು, ರಾಜ್ಯ ರಾಜಕೀಯ ಧುರೀಣರು ಪಾಲ್ಗೊಳ್ಳುವುದರಿಂದ ಅಧಿಕಾರಿಗಳು ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಸಿಪಿಐ ಕೆ.ಕುಮಾರ್ ಮಾತನಾಡಿ, ಜಾತ್ರೆಯ ಅಂಗವಾಗಿ ಸಾವಿರಾರು ಭಕ್ತರು ರಾಜ್ಯಾದ್ಯಂತ ಆಗಮಿಸುವ ಆಗಮಿಸುವ ಹಿನ್ನಲೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಗಮನ ಹರಿಸಲಾಗಿದೆ. ಹರಪನಹಳ್ಳಿ ಭಾಗದಿಂದ ಆಗಮಿಸುವ ಭಕ್ತರ ವಾಹನವನ್ನು ಪೊಲೀಸ್ ವಸತಿ ಗೃಹದ ಬಳಿ ನಿಲುಗಡೆ ಮಾಡಲಾಗಿದೆ. ದಾವಣಗೆರೆ ಭಾಗದಿಂದ ಆಗಮಿಸುವ ಭಕ್ತರಿಗೆ ಪೆಟ್ರೋಲ್ ಬಂಕ್ ಬಳಿ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಂದು ಬ್ಯಾರಿಕೆಡ್ ನಿರ್ಮಾಣ ಮಾಡಿ ಮಹಿಳೆಯರಿಗೆ, ಮುಖಂಡರಿಗೆ, ಪುರುಷರಿಗೆ ಪ್ರತ್ಯೇಕ ನಿರ್ಮಾಣ ಮಾಡಲಾಗಿದೆ. ಪ್ರಾಣಿ ಬಲಿ ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿ.ಸಿ.ಕ್ಯಾಮೆರಾ ವ್ಯವಸ್ಥೆ ಮಾಡುವುದರ ಜೊತೆಗೆ ಅಗತ್ಯ ಸಿಬ್ಬಂದಿಗಳ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ, ತಹಶೀಲ್ದಾರ್ ಡಾ.ನಾಗವೇಣಿ, ಪಿಎಸ್ ಐ ವೀರಬಸಪ್ಪ, ಉಪ ತಹಶೀಲ್ದಾರ್ ಫಾತಿಮಾ ಬೀ, ಮುಖಂಡರಾದ ವೈ.ಡಿ.ಅಣ್ಣಪ್ಪ, ಪೂಜಾರಿ ಮರಿಯಪ್ಪ, ಪರಶುರಾಮಪ್ಪ, ವಿಶ್ವನಾಥಯ್ಯ, ಷಣ್ಮುಖಪ್ಪ, ಎಂ.ಮಧು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.



