ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಇಂದು ಹೆಚ್ಚು ವರದಿಯಾಗಿದ್ದು , ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ 60 ವರ್ಷ ಮೇಲ್ಪಟ್ಟ ಸೋಂಕಿತರನ್ನು ಹೆಚ್ಚಿನ ಗಮನ ಹರಿಸಿ ಶುಶ್ರೂಷೆ ಮಾಡಿ ಜೀವ ಉಳಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ.ವಿಜಯಭಾಸ್ಕರ್ ಸೂಚಿಸಿದರು.
ಎಲ್ಲ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು, ಡಿಸಿ, ಎಸ್ಪಿ ಮತ್ತು ಸಿಇಓ ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ನಿಜಾಮುದ್ದೀನ್ ಸಮಾವೇಶದಲ್ಲಿ ರಾಜ್ಯದಿಂದ ಒಟ್ಟು 1,332 ಜನರು ಭಾಗವಹಿಸಿದ್ದರೆಂಬ ಮಾಹಿತಿ ಇದ್ದು ಇದುವರೆಗೆ 801 ಜನರನ್ನು ಟ್ರ್ಯಾಕ್ ಮಾಡಲಾಗಿದೆ. ಇವರು ರಾಜ್ಯದ್ಯಾಂತ ಚದುರಿ ಸಂಚರಿಸುತ್ತಿದ್ದು ಎಲ್ಲ ಜಿಲ್ಲಾಡಳಿತ, ಎಸ್ಪಿ ಗಳು ಟ್ರ್ಯಾಕ್ ಮಾಡಿ ಸೋಂಕು ಹರಡದಂತೆ ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಜರುಗಿಸಬೇಕೆಂದು ತಿಳಿಸಿದರು.
ಸೋಂಕಿತರನ್ನು ಶುಶ್ರೂಷೆ ಮಾಡಲು ಅಗತ್ಯವಾಗಿರುವ ಪಿಪಿಇ ಕಿಟ್ಗಳ ಲಭ್ಯತೆ ಸಾಕಷ್ಟಿದೆ. ಆದರೆ ಲಭ್ಯತೆ ಇದೆ ಎಂದು ಅನಗತ್ಯವಾಗಿ ಬಳಸಬಾರದು, ವ್ಯರ್ಥ ಐಸಿಎಂಆರ್ ಮಾರ್ಗಸೂಚಿಯನ್ವಯವೇ ಬಳಸಬೇಕು. ಇನ್ನು ಎನ್-95 ಮಾಸ್ಕ್ ಗಳ ಲಭ್ಯತೆ ಅಷ್ಟು ಇರುವುದಿಲ್ಲವಾದ ಕಾರಣ ಅವಶ್ಯಕತೆ ಇಲ್ಲದವರು ಇದನ್ನು ಬಳಸಕೂಡದು.
ದೇಶದಲ್ಲಿ ಸುಮಾರು 16 ಸಾವಿರ ಹಾಗೂ ರಾಜ್ಯದಲ್ಲಿ 750 ವೆಂಟಿಲೇಟರ್ಗಳ ಲಭ್ಯತೆ ಇದ್ದು, ದೇಶಾದ್ಯಂತ ಇದುವರೆಗೆ 20 ಸೋಂಕಿತರು ಮಾತ್ರ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಯಾರೂ ವೆಂಟಿಲೇಟರ್ ಚಿಕಿತ್ಸೆಯಲ್ಲಿ ಇಲ್ಲ ಎಂದ ಅವರು ಇನ್ನೂ ಹೆಚ್ಚುವರಿ ಆರ್ಡರ್ ಮಾಡಲಾಗಿದೆ ಎಂದ ಅವರು ಕೆಲವು ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದಿಲ್ಲವೆಂಬ ಮಾಹಿತಿ ಇದ್ದು, ಡಿಸಿ ಎಸ್ಪಿಯವರು ಖಾಸಗಿಯವರ ಮನವೊಲಿಸಿ ಆಸ್ಪತ್ರೆ ತೆರೆಯಲು ಕ್ರಮ ಜರುಗಿಸಬೇಕೆಂದರು.
ರಾಜ್ಯಾದ್ಯಂತ ಸರಕು ಸಾಗಣೆ ಸಾರಿಗೆಗೆ ಯಾರೂ ಅಡ್ಡಿಪಡಿಸುವಂತಿಲ್ಲ. ಎಪಿಎಂಸಿ ಬಂದ್ ಮಾಡಬಾರದು. ಎಲ್ಲ ರೀತಿಯ ಕೃಷಿ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಿದ್ದು, ಒಕ್ಕಲು ಯಂತ್ರಕ್ಕೂ ಅನುಮತಿ ನೀಡಲಾಗಿದೆ. ಬಿತ್ತನೆ ಬೀಜದ ಕೊರತೆ ಇರುವುದಿಲ್ಲ. ಜಿಲ್ಲೆಗಳಲ್ಲಿನ ಆಹಾರ ಸಂಸ್ಕರಣಾ ಘಟಕಗಳನ್ನು ತೆರೆಯಬೇಕು.
ಓಟಿಪಿ ಮತ್ತು ಇತರೆ ತಾಂತ್ರಿಕ ತೊಂದರೆಗಳಿದ್ದರೂ ಎರಡು ತಿಂಗಳ ಪಡಿತರ ನೀಡಲು ತಿಳಿಸಲಾಗಿದೆ. ಹಾಲನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು. ವಲಸಿ ಕಾರ್ಮಿಕರ ಶಿಬಿರಗಳಲ್ಲಿ ಶುಚಿತ್ವ ಸೇರಿದಂತೆ ಅಧಿಕಾರಿಯನ್ನು ನೇಮಿಸಿ ಪರಿಶೀಲನೆ ನಡೆಸಿ ವರದಿ ನೀಡಬೇಕು. ಹಾಪ್ಕಾಮ್ಸ್ ಸಕ್ರಿಯವಾಗಿ ಕೆಲಸ ಮಾಡಬೇಕು ಎಂದರು.



