ಡಿವಿಜಿ ಸುದ್ದಿ.ಕಾಂ. ದಾವಣಗೆರೆ: ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ದೃಷ್ಠಿದೋಷ ಸಮಸ್ಯೆ ಸಾಮಾನ್ಯವಾಗಿದೆ. ಕಾಲ ಕಾಲಕ್ಕೆ ಸೂಕ್ತ ಚಿಕಿತ್ಸೆ ಮೂಲಕ ಅಂಧತ್ವ ನಿವಾರಿಸಿಕೊಳ್ಳಬಹುದು ಎಂದು ರೋಟರಿ ಕ್ಲಬ್ ನ ನಯನ ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ನಗರದ ಛಲವಾದಿ ಕೇರಿಯ ಅಂಗನವಾಡಿ ಕೇಂದ್ರದಲ್ಲಿ ‘ಐಮಿತ್ರ 2.5 ನ್ಯೂ ವ್ಹಿಜನ್ ಜನರೇಷನ್’ ವತಿಯಿಂದ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ದೃಷ್ಟಿ ದೋಷ ಸಾಮಾನ್ಯವಾಗಿ ಕಂಡು ಬರುತ್ತಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಬಡವರಿಗೆ ಅನುಕೂಲ ಆಗುವ ಉದ್ದೇಶದಿಂದ ತಪಾಸಣೆ ಶಿಬಿರಗಳ ಆಯೋಜಿಸಲಾಗಿದೆ ಎಂದರು.
ರೋಟರಿ ಸಂಸ್ಥೆಯಿಂದ ಬಡವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಇದರಿಂದ ಮುಂದೆ ಜೀವನದಲ್ಲಿ ಸಂಭವಿಸುವ ಅಂಧತ್ವವನ್ನು ನಿವಾರಿಸಿಕೊಳ್ಳಲು ಸಹಾಯಕವಾಗಲಿದೆ.
ಮೊಬೈಲ್ ಫೋನ್ ಸೇರಿದಂತೆ ಡಿಜಿಟಲ್ ತಂತ್ರಜ್ಞಾನ ಬಳಕೆಯಿಂದ ಮಕ್ಕಳ ಬದುಕು ಕತ್ತಲಾಗಿಸುತ್ತಿದೆ. ಹೊರಾಂಗಣ ಕ್ರೀಡೆಗಳಿಂದ ವಿಮುಖರಾಗಿ ಕಂಪ್ಯೂಟರ್, ಮೊಬೈಲ್, ಐಪ್ಯಾಡ್, ವಿಡಿಯೋ ಗೇಮ್ಸ್, ಟಿ.ವಿ.ಗೆ ಜೋತು ಬೀಳುತ್ತಿರುವ ಮಕ್ಕಳಲ್ಲಿ ಕಲಿಕೆಗೆ ಹಿನ್ನೆಡೆ ಆಗಿ ದೃಷ್ಠಿ ಸಮಸ್ಯೆ ಉಲ್ಭಣಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ರುದ್ರಮುನಿಸ್ವಾಮಿ ಹೇಳಿದರು.
ಎಸ್ಸಿಲ್ಲಾರ್ ಕಂಪನಿಯ ದಕ್ಷಿಣ ಏಷ್ಯಾದ ಮುಖ್ಯಸ್ಥೆ ಗಾರ್ಗಿ ಕೌರ್, ಕಣ್ಣಿನ ಸಮಸ್ಯೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಕಂಡು ಬರುತ್ತಿದೆ. ಕಣ್ಣಿನ ಮೇಲೆ ತೀವ್ರವಾದ ಒತ್ತಡದಿಂದ ಬಾಲ್ಯದಲ್ಲಿಯೇ ದೃಷ್ಠಿ ಸಮಸ್ಯೆಗೆ ಒಳಗಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಇದರಿಂದ ಮಕ್ಕಳನ್ನು ಪಾರು ಮಾಡಲು ಡಿಜಿಟಲ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ ಹೊರಗೆ ಆಟವಾಡಲು ಪೋಷಕರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಬಗರೆ, ಕಾಂಗ್ರೆಸ್ ಯುವ ಮುಖಂಡ ಸಾಗರ್ ಎಲ್.ಹೆಚ್., ಪ್ರಭಾಕರ ತೆಲಗಾವಿ, ನೇತ್ರ ತಜ್ಞರಾದ ಪವಿತ್ರ, ಸೌಮ್ಯ, ಹರಿಪ್ರಸಾದ್, ಶೃತಿ, ಅರುಣ್, ವಿನಯ್, ಮಹಮ್ಮದ್ಗೌಸ್, ಚೇತನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.