ಡಿವಿಜಿ ಸುದ್ದಿ. ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆ ಮೀಸಲಾತಿ ಪಟ್ಟಿಯಲ್ಲಿ ವೀರಶೈವರಿಗೆ ಅನ್ಯಾಯವಾಗಿದ್ದು, ಈ ಚುನಾವಣೆಯನ್ನು ವೀರಶೈವ ಮಹಾಸಭಾ ಖಂಡಿಸುತ್ತದೆ ಎಂದು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾ ಸಭಾ ಯುವ ಘಟಕದ ಅಧ್ಯಕ್ಷ ಶಿವನಗೌಡ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ತಯಾರಿಸಿದ ಮೀಸಲಾತಿ ಪಟ್ಟಿ ಅವೈಜ್ಞಾನಿಕತೆಯಿಂದ ಕೂಡಿದೆ. ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಲಾಗಿದ್ದು, ಅಲ್ಪ ಸಂಖ್ಯಾತರು ಇರವ ಕಡೆ ವೀರಶೈವ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ಬಗ್ಗೆ ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷರ ಗಮನಕ್ಕೆ ಬಂದಿಲ್ಲವೇ ಎಂದರು.
ಮಹಾ ಸಭಾ ಅಧ್ಯಕ್ಷರ ಹಿಂಬಾಲಕರೇ ವೀರಶೈವರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾ ನಗರದಲ್ಲಿ 7 ಸಾವಿರಕ್ಕೂ ಹೆಚ್ಚು ಲಿಂಗಾಯತರಿದ್ದು, ಅಲ್ಲಿ ಒಬ್ಬರಿಗೂ ಅವಕಾಶವಿಲ್ಲ. ಇನ್ನು ಅಜಾದ್ ನಗರ, ಜಾಲಿಗರದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ ವ್ಯವಸ್ಥಿತವಾಗಿ ವೀರಶೈವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ.
ಇದಕ್ಕೆಲ್ಲ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮೀಸಲಾತಿ ಪಟ್ಟಿಯಲ್ಲಿ ಎಸ್ಸಿ, ಎಸ್ಟಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಮೂಲಕ ವೀರಶೈವರು ಚುನಾವಣೆಗೆ ನಿಲ್ಲದಂತೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ವೀರಶೈವ ಮುಖಂಡರಾದ ಗಣೇಶ್, ಹಾಲೇಶ್, ಮಲ್ಲಿಕಾರ್ಜುನ ಕಟ್ಟಿಮನಿ, ಶಿವನಗೌಡ ಪಾಟೀಲ್, ಜಿ.ಎಸ್. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.



