ಪ್ರಾಮಾಣಿಕ ಸೇವಾ ಜೀವಿ ಡಾ.ಜಿ.ಮಂಜುನಾಥ್ ಗೌಡರಿಗೆ ಭಾರವಾದ ಹೃದಯದಿಂದ ಭಾವ ಪೂರ್ಣ ಶ್ರದ್ಧಾಂಜಲಿ.
ಜಗಳೂರು ತರಳಬಾಳು ಹುಣ್ಣಿಮೆಯ ಮಹೋತ್ಸವದ ಪ್ರಧಾನ ಕಾರ್ಯದರ್ಶಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ ಮಹೋತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸಿದ, ಏತ ನೀರಾವರಿ ಯೋಜನೆಗೆ ದಶಕಗಳಿಂದ ಅವಿರತ ಹೋರಾಟ ರೂಪಿಸಿದ, 22 ಕೆರೆಗಳ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಆ ಯೋಜನೆಯನ್ನು 53 ಕೆರೆಗಳಿಗೆ ವಿಸ್ತರಿಸಲು ತರಳಬಾಳು ಶ್ರೀ ಜಗದ್ಗುರುಗಳವರಿಗೆ ಹೆಗಲಾಗಿದ್ದ, ಮೃದುಭಾಷಿ, ಸೌಮ್ಯಸ್ವಭಾವಿ, ಎಲ್ಲರನ್ನೂ ಗೌರವದಿಂದ ಕಾಣುವ ಅಪರೂಪದಲ್ಲಿಯೇ ಅಪರೂಪದ ವ್ಯಕ್ತಿತ್ವದ ದಾವಣಗೆರೆ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥರು, ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ಜಿ.ಮಂಜುನಾಥ್ ಗೌಡರವರು ನಿನ್ನೆ ರಾತ್ರಿ 10.00 ರ ಸಮಯಕ್ಕೆ ಬಹು ಅಂಗಾಂಗ ವಿಫಲತೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಬಂದ ಸಮಾಚಾರ ಅತ್ಯಂತ ದುಃಖ ತರಿಸಿತು.
ಗೌಡರು ಗುಜರಾತಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಅಲ್ಲಿನ ನೀರಾವರಿ ಯೋಜನೆಗಳಿಂದ ಪ್ರೇರೇಪಣೆ ಹೊಂದಿದ್ದರು. ತರಳಬಾಳು ಶ್ರೀ ಜಗದ್ಗುರುಗಳವರ ಸಂಕಲ್ಪದ ಎಲ್ಲಾ ನೀರಾವರಿ ಯೋಜನೆಗಳ ಕಾರ್ಯಾನುಷ್ಠಾನದಲ್ಲಿ ಶ್ರಮಿಸಿದ್ದರು. 2018 ರಲ್ಲಿ ಜಗಳೂರಿನಲ್ಲಿ ಅವರೊಂದಿಗೆ ಮಾತನಾಡುವಾಗ ಮುಂದಿನ ವಿಧಾನ ಪರಿಷತ್ ಸದಸ್ಯರು ಎಂದು ಹೇಳಿದಾಗ ತುಂಬುನಗೆಯೊಂದಿಗೆ ಸಂತಸ ಪಟ್ಟಿದ್ದರು. ಚುನಾವಣೆಗಾಗಿ ಎಲ್ಲಾ ಕಾರ್ಯಗಳನ್ನು ಅತ್ಯಂತ ಕ್ರೀಯಾಶೀಲರಾಗಿ ಕಳೆದ ಮೂರು ವರ್ಷಗಳಿಂದ ನಿರ್ವಹಿಸುತ್ತಿದ್ದರು.
ರಾಜ್ಯದ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರುಗಳನ್ನು ನಾಲ್ಕೈದು ಬಾರಿ ಭೇಟಿಯಾಗಿದ್ದರು. ಮೂವತ್ತು ಸಾವಿರಕ್ಕೂ ಹೆಚ್ಚು ಪದವೀಧರರ ಮತದಾರರ ನೊಂದಾವಣಿಯನ್ನು ಮಾಡಿಸಿದ್ದರು. 2020 ರ ಮಾರ್ಚ್ ನಲ್ಲಿ ಬೆಂಗಳೂರಿನಲ್ಲಿ ಇದೇ ಟಿಕೆಟ್ ವಿಚಾರ ಸಂಬಂಧವಾಗಿ ಬೆಂಗಳೂರಿನಲ್ಲಿ ಮುಖ್ಯ ಮಂತ್ರಿಗಳನ್ನು ಧವಳಗಿರಿ ನಿವಾಸದಲ್ಲಿ ಭೇಟಿಯಾಗಿ ನಂತರ ಮಾತಿಗೆ ಸಿಕ್ಕಾಗ ಟಿಕೆಟ್ ದೊರಕುವುದು ಕಷ್ಟ ಸಾಧ್ಯ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಸಮಾಜ ಮತ್ತು ಸಾರ್ವಜನಿಕ ಸೇವೆ ಯನ್ನು ಶುಭ್ರ ಮನಸ್ಸಿನ ಅಜಾತ ಶತ್ರುವಿನ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಗೌಡ್ರು ಸದಾ ಸ್ಮರಣೀಯರಾದವರು. ಅವರ ಒಡೆತನದ ಆಸ್ಪತ್ರೆಯ ಬಡ ರೋಗಿಗಳಿಗೆ ಮಾನವೀಯತೆಯ ಅಂತಃಕರಣದ ಸಹಾಯವನ್ನು ಯಾವತ್ತೂ ಚಾಚುತ್ತಿದ್ದರು.
ವಿಧಿಯ ಅಟ್ಟಹಾಸಕ್ಕೆ ಸಮಾಜವು ಪ್ರಾಮಾಣಿಕ ಸೇವಕರೊಬ್ಬರನ್ನು ಕಳೆದುಕೊಂಡಿದೆ. ಕಣ್ಣಾಲಿಗಳು ಒದ್ದೆಯಾಗಿವೆ. ಭಾರವಾದ ಹೃದಯದಿಂದ ಭಾವ ಶ್ರದ್ಧಾಂಜಲಿಯನ್ನು ಮಾತ್ರ ಹೇಳಲು ಮಾತ್ರ ಸಾಧ್ಯವಾಗಿದೆ. ತರಳಬಾಳು ಜಗದ್ಗುರು ಬೃಹನ್ಮಠದ ಕೊಂಡಿಯಾಗಿ ರೈತರ ಅಭ್ಯುದಯಕ್ಕೆ ಅವಿರತವಾಗಿ ಸೇವೆಗೈದ ನಿಸ್ವಾರ್ಥಿ ಮಂಜುನಾಥ್ ಗೌಡರು. ಗೌಡರ ಕುಟುಂಬಕ್ಕೆ ತರಳಬಾಳು ಶ್ರೀ ಗುರು ಪರಂಪರೆಯ ಆಶೀರ್ವಾದ ಶ್ರೀ ರಕ್ಷೆಯ ಸಾಂತ್ವನ ಸದಾ ಇರಲಿ.
-ಬಸವರಾಜ ಸಿರಿಗೆರೆ