ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಸದ್ದು ಮಾಡುತ್ತಿದ್ದು, ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಈ ಮೂಲಕ ಬೇಸಿಗೆ ಬಿಸಿಲಿನಿಂದ ತತ್ತರಿಸಿದ್ದ ದಾವಣಗೆರೆ ಜಿಲ್ಲೆ ತಾಂಪಾಗಿದೆ. ಆದರೆ, ರೈತರಿಗೆ ಮಾತ್ರ ಸಂಕಷ್ಟ ತಂದಿದೆ.
ಜಿಲ್ಲೆಯಲ್ಲಿ ಮೇ 18 ರಂದು ಸರಾಸರಿ 30.0 ಮಿ.ಮೀ ಮಳೆಯಾಗಿದ್ದು, 52.26 ಲಕ್ಷ ರೂಪಾಯಿ ಅಂದಾಜು ನಷ್ಟ ಸಂಭವಿಸಿದೆ. ಜಿಲ್ಲೆಯಲ್ಲಿ ಭತ್ತ ಕಟಾವಿಗೆ ಬಂದಿದ್ದು, ಮುಂಗಾರು ಪೂರ್ವ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ.
ಮಳೆಯ ವಿವರ: ಚನ್ನಗಿರಿ 2.6 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, ವಾಸ್ತವಾಗಿ 35.2 ಮಿ.ಮೀ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 3.4 ಮಿ.ಮೀ ವಾಡಿಕೆ ನಿರೀಕ್ಷಿಸಲಾಗಿತ್ತು. ಆದರೆ, 32.3 ಮಿ.ಮೀ ಮಳೆ ಯಾಗಿದ್ದು, ಹರಿಹರದಲ್ಲಿ 3.6 ಮಿ.ಮೀ ವಾಡಿಕೆ ಮಳೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, 26.3 ಮಿ.ಮೀ ಮಳೆಯಾಗಿದೆ. ಹೊನ್ನಾಳಿ 5.1 ಮಿ.ಮೀ ವಾಡಿಕೆ ಆಗುವ ಸಾಧ್ಯತೆ ಇತ್ತು. ವಾಸ್ತವಾದಲ್ಲಿ 28.0 ಮಿ.ಮೀ ಮಳೆಯಾಗಿದೆ. ಇನ್ನು ಬರ ಪೀಡಿತ ತಾಲ್ಲೂಕು ಜಗಳೂರು 4.1 ಮಿ.ಮೀ ಮಳೆಯಾಗುವ ನಿರೀಕ್ಷೆ ಮಾಡಲಾಗಿತ್ತು. ಅಲ್ಲಿಯೂ ಕೂಡ 24.0 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಒಟ್ಟು 4.0 ಮಿ.ಮೀ ಮಳೆಯಾಗಬೇಕಿತ್ತು. ಆದರೆ, ನಿರೀಕ್ಷಗೂ ಮೀರಿ ಸರಾಸರಿ 30.0 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ರೂ. 52.26 ಲಕ್ಷ ನಷ್ಟ ಸಂಭವಿಸಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 50 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಕೋಡಿಹಳ್ಳಿ ಗ್ರಾಮದಲ್ಲಿ 8 ಎಕರೆ ಭತ್ತದ ಬೆಳೆ, ಐಗೂರು ಗ್ರಾಮದಲ್ಲಿ 2 ಎಕರೆ ಎಲೆಬಳ್ಳಿ, ಕುರ್ಕಿ ಗ್ರಾಮದಲ್ಲಿ 0.10 ಎಕರೆ ಅಡಿಕೆ ಮತ್ತು ರಂಗವ್ವನಹಳ್ಳಿ ಗ್ರಾಮದಲ್ಲಿ 0.05 ಎಕರೆ ಅಡಿಕೆ ಬೆಳೆ ಸೇರಿದಂತೆ ಒಟ್ಟು 10.15 ಎಕರೆ ಬೆಳೆ ಹಾನಿ ಸಂಭವಿಸಿದ್ದು, ರೂ. 1.30 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಮನೆ ಭಾಗಶಃ ಹಾನಿಯಾಗಿದ್ದು, ರೂ. 10 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. 857.25 ಎಕರೆ ಭತ್ತ ಮತ್ತು ಬಾಳೆ ಬೆಳೆ ಹಾನಿಯಾಗಿದ್ದು, ರೂ. 46.36 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ನ್ಯಾಮತಿ ತಾಲ್ಲೂಕಿನಲ್ಲಿ 4 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 1 ಲಕ್ಷ ಮತ್ತು ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ. 30 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ. 3.10 ಎಕರೆ ಬೆಳೆ ಹಾನಿಯಾಗಿದ್ದು, ರೂ. 2.50 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 4 ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 20 ಸಾವಿರ ಅಂದಾಜು ನಷ್ಟ ಸಂಭವಿಸಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.