ಡಿವಿಜಿ ಸುದ್ದಿ, ದಾವಣಗೆರೆ; ಜಿಲ್ಲೆಯಲ್ಲಿ ಬೇಸಿಗೆ ಭತ್ತ ಕಟಾವಿಗೆ ಬಂದಿದ್ದು, ಲಾಕ್ ಡೌನ್ ಹಿನ್ನೆಲೆ ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದ್ದು, ಈಗಾಗಲೇ ಜಿಲ್ಲಾಡಳಿತ ಭತ್ತ ಕಟಾವಿಗೆ ಪ್ರತಿ ಗಂಟೆಗೆ 1800 ರೂಪಾಯಿ ನಿಗದಿ ಮಾಡಿದೆ. ಯಂತ್ರಗಳ ಮಾಲೀಕರು ಜಿಲ್ಲಾಡಳಿತ ನಿಗದಿ ಮಾಡಿದ ದರದಲ್ಲಿಯೇ ಕಟಾವು ಮಾಡಬೇಕು ಎಂದು ಸಂಸದ ಜಿ.ಎ. ಸಿದ್ದೇಶ್ವರ್ ಸೂಚಿಸಿದರು.
ಕೃಷಿ ವಲಯದಲ್ಲಿ ಯಾವುದೇ ತೊಂದರೆ ನೀಡದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಭತ್ತ ಕಟಾವಿಗೆ ,ಹೊರ ರಾಜ್ಯಗಳಿಂದ ಯಂತ್ರ ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತಮಿಳುನಾಡು, ಆಂಧ್ರಪ್ರದೇಶ ದಿಂದ ಭತ್ತ ಕಟಾವು ಯಂತ್ರಗಳು ಜಿಲ್ಲೆಗೆ ಬಂದಿವೆ. ಕಳೆದ ಸಲ 2, 200 ರೂಪಾಯಿಯಂತೆ ಭತ್ತ ಕಟಾವು ಮಾಡಿರುವುದಾಗಿ ಮಾಲೀಕರು ಹೇಳಿದ್ದಾರೆ. ಆದರೆ, ಈಗ ಲಾಕ್ ಡೌನ್ ನಿಂದ ರೈತರ ಸಂಕಷ್ಟದಲ್ಲಿದ್ದು, ಪ್ರತಿ ಗಂಟೆಗೆ 1,800 ದರದಲ್ಲಿಯೇ ಕಟಾವು ಮಾಡುವಂತೆ ಆದೇಶಿಸಲಾಗಿದೆ ಎಂದರು.



