ಡಿವಿಜಿ ಸುದ್ದಿ, ದಾವಣಗೆರೆ: ನಗರವನ್ನು ಸ್ವಚ್ಛತೆ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಬರುವಂತೆ ಮಾಡಲು ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಮಹಾನಗರ ಪಾಲಿಕೆ ಆವರಣದಲ್ಲಿ ವಿವಿಧ ಯೋಜನೆ ಫಲಾನುಭವಿಗಳಿಗೆ ಕಿಟ್ ವಿತರಿಸಿ ಮಾತನಾಡಿದರು. ಸ್ವಚ್ಛತೆಯಲ್ಲಿ ಮೈಸೂರು ನಗರ ಮೊದಲ ಸ್ಥಾನದಲ್ಲಿದೆ. ದಾವಣಗೆರೆ ಕೊನೆಯ ಸ್ಥಾನದಲ್ಲಿದೆ. ಈ ಸಮೀಕ್ಷೆ ಕಳೆದ ವರ್ಷದ್ದು, ಮುಂದಿನ ವರ್ಷ ಮೊದಲ ಸ್ಥಾನಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಈ ಬಗ್ಗೆ ಪಾಲಿಕೆ ಎಲ್ಲ ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ಮಾರ್ಟ್ಸಿಟಿ ಯೋಜನೆಯಡಿ ಈಗಾಗಲೇ 200 ಕೋಟಿ ಖರ್ಚಾಗಿದ್ದು, ಇನ್ನು 800 ಕೋಟಿ ಖರ್ಚು ಮಾಡಬೇಕಿದೆ. ಇನ್ನು ಹೆಚ್ಚಿನ ಹಣ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ರೂ. 10 ಸಾವಿರಗಳವರೆಗಿನ ಸಾಲ ಸೌಲಭ್ಯವನ್ನು ಶೇ 7% ಬಡ್ಡಿ ಸಹಾಯಧನದೊಂದಿಗೆ ಬ್ಯಾಂಕ್ ಮುಖಾಂತರ ಅನುಷ್ಟಾನಗೊಳಿಸಲು ಈಗಾಗಲೇ ಕ್ರಮ ಕೈಗೊಂಡಿದ್ದು, ಇದುವರೆಗೆ 1200 ಅರ್ಜಿಗಳನ್ನು ಬ್ಯಾಂಕ್ಗೆ ಕಳುಹಿಸಲಾಗಿದೆ. ಆದರೆ 115 ಮಂದಿಗೆ ಮಾತ್ರ ಸಾಲ ಮಂಜೂರಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಗೆ 125 ಕೋಟಿ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹಿ ಹಾಕುವುದು ಸ್ವಲ್ಪ ತಡವಾಗಿದ್ದರಿಂದ ವಿಳಂಬವಾಗಿದೆ. ಕೊರೊನಾ ಮಧ್ಯೆಯೂ ಜುಲೈ ಅಂತ್ಯಕ್ಕೆ 15 ಕೋಟಿ ತೆರಿಗೆಯನ್ನು ಜನರು ಕಟ್ಟಿದ್ದಾರೆ. ಇದರಲ್ಲಿ ವಿದ್ಯುತ್ ದೀಪ, ಚರಂಡಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಲಿದ್ದು, 10 ಕೋಟಿ ಉಳಿಯುತ್ತದೆ. ಶಾಸಕ ಎಸ್.ಎ. ರವೀಂದ್ರನಾಥ್ 10 ಕೋಟಿ ಅನುದಾನ ತಂದಿದ್ದು, ಅದರಲ್ಲಿಯೂ 5 ಕೋಟಿ ಉಳಿದಿದ್ದು ಒಟ್ಟು 25 ಕೋಟಿ ಖರ್ಚು ಮಾಡಿದ್ದಾರೆ ಎಂದರು.

ಮೇಯರ್ ಬಿ.ಜಿ. ಅಜಯ್ಕುಮಾರ್ ಮಾತನಾಡಿ, ಒಂದು ತಿಂಗಳಲ್ಲಿ 3.78 ಕೋಟಿ ಹಣ ಸಂಗ್ರಹವಾಗಿದೆ. ಇದನ್ನು ಕ್ರೀಡಾಪಟುಗಳಿಗೆ, ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡವರಿಗೆ ವೈದ್ಯಕೀಯ ವೆಚ್ಚ ಹಾಗೂ ಮನೆಗಳ ನಿರ್ಮಾಣಕ್ಕೆ ಉಪಯೋಹಿಸಲಾಗುವುದು. ಆತ್ಮನಿರ್ಭರ್’ ಯೋಜನೆಯಡಿ 3 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಇದ್ದು, ಆ ಮೂಲಕ ರಾಜ್ಯದ 10 ಪಾಲಿಕೆಗಳಲ್ಲಿ ದಾವಣಗೆರೆ ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು. 15ನೇ ಹಣಕಾಸು ಯೋಜನೆಯಡಿ 35 ಕೋಟಿ ಹಣ ಬಂದಿದ್ದು, 17 ಕೋಟಿಗಳಲ್ಲಿ ಪ್ರತಿ ವಾರ್ಡ್ನಲ್ಲೂ ಸಿವಿಲ್ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ಅಂಗವಿಕಲರಿಗೆ 28 ಯಂತ್ರಚಾಲಿತ ವಾಹನ, ಮೂಗ ಹಾಗೂ ಕಿವುಡ ವಿದ್ಯಾರ್ಥಿಗಳಿಗೆ 19 ಲ್ಯಾಪ್ಟಾಪ್, 121 ಮ್ಯಾನುಯಲ್ ಸ್ಕ್ಯಾವೆಂಜರ್ ಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು 55 ಹೊಲಿಗೆ ಯಂತ್ರ, 46 ಜೆರಾಕ್ಸ್ ಮಷಿನ್, 20 ತಳ್ಳುವ ಗಾಡಿಗಳನ್ನು ವಿತರಿಸಲಾಯಿತು.
ಉಪಮೇಯರ್ ಸೌಮ್ಯ ನರೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಟಿ.ವೀರೇಶ್, ಪ್ರಸನ್ನಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



