Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ  ವೈರಸ್ ಪ್ರಕರಣ ಪತ್ತೆ ಇಲ್ಲ,  ಭೀತಿ ಬೇಡ: ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕೊರೊನಾ  ವೈರಸ್ ಪ್ರಕರಣ ಪತ್ತೆ ಇಲ್ಲ,  ಭೀತಿ ಬೇಡ: ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ:  ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಜನರು ಭೀತಿ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.

ಕೊರೊನಾ ವೈರಸ್ ಸೋಂಕಿನ ಕುರಿತು ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಂತರ  ಮಾತನಾಡಿದ  ಅವರು,  ಸಾರ್ವಜನಿಕರಲ್ಲಿ ಕೊರೊನಾ ಅರಿವು ಮುಖ್ಯ, ಭೀತಿ ಬೇಡ . ಹಳೆಯದಾದರೂ ಸ್ವಚ್ಚ ಮಾಡಿದ ಯಾವುದೇ ಬಟ್ಟೆಯನ್ನು ಮಾಸ್ಕ್ ರೀತಿ ಉಪಯೋಗಿಸಬಹುದು. ‘ಮಾಸ್ಕ್ ಹಾವಳಿ’ ಕಡಿಮೆ ಆಗಬೇಕು. ಮಾಸ್ಕ್ ಬಳಕೆ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆ ಇದೆ ಎಂದರು.

ಮನುಷ್ಯರಿಂದ ಮಾತ್ರ ಈ ಕರೋನಾ ಇನ್ನೊಬ್ಬ ಮನುಷ್ಯರಿಗೆ ಹರಡುವ ಸೋಂಕಾಗಿದ್ದು, ಕೋಳಿ ಮತ್ತು ಇತರೆ ಮಾಂಸ ಭಕ್ಷಣೆಯಿಂದ ಯಾವುದೇ ರೀತಿಯ ತೊಂದರೆ ವರದಿಯಾಗಿಲ್ಲ.ಜಿಲ್ಲೆಯ ಹರಿಹರ ಅಥವಾ ಶಾಂತಿಸಾಗರ ಹೀಗೆ ಪ್ರವಾಸಿ ಸ್ಥಳಗಳಿಗೆ ಬರುವ ವಿದೇಶಿ ಪ್ರವಾಸಿಗರು ಹಾಗೂ ಕೇರಳ, ಆಂಧ್ರ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯಗಳಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ಪ್ರತಿ ದಿನ ಪ್ರವಾಸೋದ್ಯಮ ಇಲಾಖೆಯವರು ಡಿಹೆಚ್‍ಓ ಅವರಿಗೆ ವರದಿ ಮಾಡಬೇಕು.

ಪೊಲೀಸ್ ಇಲಾಖೆಯವರು ವಿದೇಶಗಳಿಂದ ಬರುವ ವಿದ್ಯಾರ್ಥಿಗಳ ಪಟ್ಟಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ನೀಡಬೇಕು. ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪಿಡಿಓ ಮತ್ತು ಇಓ ಗಳಿಗೆ ಸೋಂಕಿನ ಕುರಿತು ವೈದ್ಯರಿಂದ ಅರಿವು ಕಾರ್ಯಕ್ರಮ ಏರ್ಪಡಿಸಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಡಿಹೆಚ್‍ಓ, ಜಿಲ್ಲಾ ಶಸ್ತ್ರಚಿಕಿತ್ಸಕರು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಗೂ ನಗರಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳು ಅಧಿಕೃತ ಅಧಿಕಾರಿಗಳೆಂದು ಸರ್ಕಾರ ಗುರುತಿಸಿದ್ದು, ಇವರು ಮಾತ್ರ ಕೊರೊನಾ ವೈರಸ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಬಹುದಾಗಿದೆ.

ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ : ಟಿವಿ, ಪತ್ರಿಕೆ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಕುರಿತಾಗಿ ಭೀತಿ ಹುಟ್ಟಿಸುವಂತಹ, ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ಭಾಗಿಯಾಗುವುದು ಶಿಕ್ಷಾರ್ಹವಾಗಿದ್ದು, ಇಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.

ಫ್ಲೂ ಕಾರ್ನರ್ : ಎಲ್ಲ ಖಾಸಗಿ ಮತ್ತು ಸರ್ಕರಿ ಆಸ್ಪತ್ರೆಗಳಲ್ಲಿ ಕೆಮ್ಮು, ಶೀತದಂತಹ ಫ್ಲೂ ಲಕ್ಷಣಗಳನ್ನು ಪರೀಕ್ಷಿಸಲು ಪ್ರತ್ಯೇಕ ಫ್ಲೂಕಾರ್ನರ್ ವ್ಯವಸ್ಥೆ ಮಾಡಬೇಕು. ಹಾಗೂ ಎಲ್ಲ ಆಸ್ಪತ್ರೆಗಳು ಪ್ರವಾಸಿ ವರದಿಯನ್ನು ನಿರ್ವಹಿಸಬೇಕು. ಯಾವುದಾದರೂ ರೋಗಿ ವಿದೇಶ ಅಥವಾ ಹೊರ ರಾಜ್ಯಗಳಿಗೆ ಪ್ರವಾಸ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ, ಹಾಗೆ ಒಂದು ಪಕ್ಷ ಕೊರೊನಾ ಪೀಡಿತ ದೇಶಗಳಿಗೆ ಹೋಗಿ ಬಂದಿದ್ದರೆ ಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ 28 ದಿನ ನಿಗಾವಣೆ ಮಾಡಬೇಕು.
ವಿದೇಶ ಪ್ರವಾಸ ಮಾಡಿ ಬಂದಿದ್ದು, ನಿವಾಗವಣೆಗೆ ನಿರಾಕರಿಸಿದರೆ ಅಂತಹವರನ್ನು ಅಧಿಕೃತ ಅಧಿಕಾರಿಗಳು ಕಡ್ಡಾಯವಾಗಿ ಅವರನ್ನು ನಿಗಾವಣೆಯಲ್ಲಿ ಇರಿಸಬಹುದಾಗಿದೆ.
ಹೆಲ್ಪ್‍ಡೆಸ್ಕ್ : ನಗರದ ಬಸ್‍ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಮಾಹಿತಿ ಮತ್ತು ಸಹಾಯ ಒದಗಿಸಲು ತಲಾ ಒಂದು ಹೆಲ್ಪ್‍ಡೆಸ್ಕ್ ತೆರೆಯುವಂತೆ ಸೂಚನೆ ನೀಡಿದರು.
ನಗರಪಾಲಿಕೆ, ಪಟ್ಟಣ ಪಂಚಾಯ್ತಿ, ಪುರ ಪಂಚಾಯ್ತಿಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಾರದ ಸಂತೆ, ಜಾತ್ರೆಗಳಲ್ಲಿ ಸ್ಥಳೀಯ ಸಂಸ್ಥೆಗಳ ವತಿಯಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸುವ ಕರಪತ್ರ ಇತರೆ ಮೂಲಕ ಅರಿವು ಮೂಡಿಸಬೇಕು. ಆದರೆ ಅರಿವು ಮೂಡಿಸುವ ಭರದಲ್ಲಿ ಜನರಲ್ಲಿ ಅನಗತ್ಯ ಭಯ ಸೃಷ್ಟಿಸಬಾರದು.
ಹೈದರಾಬಾದ್, ಕೇರಳ ಮತ್ತು ತಮಿಳುನಾಡುಗಳಿಗೆ ತೆರಳುವ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವನ್ನು ರದ್ದುಗೊಳಿಸುವಂತೆ ಆರ್‍ಟಿಓ ಹಾಗೂ ಕೆಎಸ್‍ಆರ್‍ಟಿಸಿ ಡಿಸಿಗೆ ಸೂಚಿಸಿದರು. ರೂ.2 ರಿಂದ 3  ಮಾಸ್ಕ್ ಗಳನ್ನು ಕೊರೊನಾ ಸೋಂಕಿನ ಭೀತಿಯ ಹಾವಳಿಗೆ ಒಳಗಾಗಿ ಬೇಡಿಕೆ ಹೆಚ್ಚಿ ರೂ.12 ರಿಂದ 14 ರವರೆಗೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ ಕಂಟ್ರೋಲರ್ ಮತ್ತು ವಾಣಿಜ್ಯ ಸಂಘದವರಿಗೆ ಪತ್ರ ಬರೆದು ಕ್ರಮ ವಹಿಸಲು ಸೂಚಿಸುತ್ತೇನೆ ಎಂದರು.

ಕಾರ್ಮಿಕ ಇಲಾಖೆ : ಇಟ್ಟಿಗೆ ಭಟ್ಟಿ, ಸೋಲಾರ್ ಮತ್ತು ವಿಂಡ್ ಪವರ್ ಯೋಜನೆಗಳಡಿ ಕೆಲಸ ಮಾಡಲು ಒರಿಸ್ಸಾ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದು ಇವರ ವಿವರವನ್ನು ಕಾರ್ಮಿಕ ಇಲಾಖೆಯವರು ಸಂಗ್ರಹಿಸಿ ನಿಗಾ ವಹಿಸಬೇಕು.
ಡಾ.ರಾಘವೇಂದ್ರಸ್ವಾಮಿ ಮಾತನಾಡಿ, ಇತ್ತೀಚೆಗೆ ದುಬೈನಿಂದ ದಾವಣಗೆರೆ ಬಂದ ಕುಟುಂಬದ ನಾಲ್ಕು ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಇನ್ನೂ ಬಂದಿಲ್ಲ. ಇನ್ನು ಮುಂದೆ ಸ್ಯಾಂಪಲ್‍ಗಳನ್ನು ಬೆಂಗಳೂರಿಗೆ ಬದಲಾಗಿ ಶಿವಮೊಗ್ಗಕ್ಕೆ ಸ್ಯಾಂಪಲ್‍ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದರು.

ಸ್ವಯಂ ವರದಿ ಮಾಡಿಕೊಳ್ಳಬೇಕು : ಯಾವುದೇ ವ್ಯಕ್ತಿ ಕೊರೊನಾ ಸೋಂಕು ಪೀಡಿತ ದೇಶಗಳಿಗೆ ಹೋಗಿ ನಮ್ಮ ದೇಶಕ್ಕೆ ಬಂದು, ಅಕಸ್ಮಾತ್ ವಿಮಾನ ನಿಲ್ದಾಣದಲ್ಲೂ ಸ್ಕ್ರೀನೀಂಗ್‍ನಲ್ಲಿ ತಪ್ಪಿ ಹೋಗಿದ್ದರೆ, ತಾವೇ ಜಿಲ್ಲಾಸ್ಪತ್ರೆಗೆ ಬಂದು ಸ್ವಯಂ ವರದಿ ಮಾಡಿಕೊಂಡು ಪರೀಕ್ಷೆಗೆ ಒಳಗಾಗಬೇಕು. ಹಾಗೂ ಈ ಕುರಿತು ಹೆಲ್ಪ್‍ಲೈನ್ ಟಾಲ್‍ಫ್ರೀ ಸಂಖ್ಯೆ 104 ಕ್ಕೆ ಕರೆ ಮಾಡಬಹುದು
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು, ಆಡಳಿತಾಧಿಕಾರಿಗಳು ಶಾಲಾ ಮಕ್ಕಳು ಮಾಸ್ಕ್ ಧರಿಸಿಕೊಂಡು ಬರುವಂತೆ ಹಲವೆಡೆ ಹೇಳುತ್ತಿರುವುದು ಕಂಡು ಬಂದಿದೆ. ಆರೋಗ್ಯವಂತರು ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಆರೋಗ್ಯ ಸಚಿವಾಲಯವು ಮಾಸ್ಕ್ ಧರಿಸುವ ಬಗ್ಗೆ ವಿಶೇಷ ಮಾರ್ಗಸೂಚಿಯನ್ನೇ ನೀಡಿದ್ದು, ಶೀತ, ಕೆಮ್ಮು ಇರುವವರು ಮಾಸ್ಕ್ ಧರಿಸಬೇಕು.

ಕೊರೊನಾ ವೈರಸ್ ಸೋಂಕು ದೃಢಪಟ್ಟಲ್ಲಿ ಸೋಂಕಿತರ ಕುಟುಂಬದವರು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮಾತ್ರ ಸರ್ಜಿಕಲ್ ಮಾಸ್ಕ್ ಧರಿಸಬೇಕು. ಆದರೆ ಕೇವಲ ಸೋಂಕಿನ ಭೀತಿಯಿಂದ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮಾಸ್ಕ್ ಧರಿಸಿದರೆ ಏನೂ ಉಪಯೋಗವಿಲ್ಲ. ಹಾಗೂ ಶಾಲೆಗಳಲ್ಲಿ ಶಿಕ್ಷಕರು, ಮುಖ್ಯಸ್ಥರು ಮಕ್ಕಳು ಮಾಸ್ಕ್ ಧರಿಸುವಂತೆ ಒತ್ತಡ ಹೇರಬಾರದು ಎಂದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

ದಾವಣಗೆರೆ

Advertisement
Advertisement Enter ad code here

Title

To Top