ಡಿವಿಜಿ ಸುದ್ದಿ, ದಾವಣಗೆರೆ:ಕಳೆದ ರಾತ್ರಿ ತಾಲ್ಲೂಕಿನ ಕೊಡಗನೂರು ಬಳಿ ಪ್ರಜಾವಾಣಿಯ ಹಾವೇರಿ ವರದಿಗಾರ ಮಂಜುನಾಥ್, ಅಪಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸದ 108 ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ ಆಗ್ರಹಿಸಿದೆ.
ದಾವಣಗೆರೆ ತಾಲ್ಲೂಕು ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ ಪತ್ರಕರ್ತರು, ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತರ ಸ್ಥಿತಿಯೇ ಈ ರೀತಿಯಾದರೆ, ಸಾಮಾನ್ಯ ಜನರ ಸ್ಥಿತಿ ಹೇಗೆ ಎಂದು ಪ್ರಶ್ನಿಸಿದರು. ಮೃತಪಟ್ಟ ದೇಹವನ್ನು ಅಂಬುಲೆನ್ಸ್ ನಲ್ಲಿ ಹಾಕುವುದಿಲ್ಲ ಹೇಳುವ ಮೂಲಕ ಅಂಬುಲೆನ್ಸ್ ಸಿಬ್ಬಂದಿ ಅಮಾನವೀಯ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಇನ್ನು ಲಗೇಜ್ ಆಟೋದಲ್ಲಿ ಮಂಜುನಾಥ್ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಕ್ರಮ ಖಂಡನೀಯ ಎಂದರು.
ಕಳೆದ ಎರಡು ವರ್ಷದ ಹಿಂದೆ ಶಿರಸಿಯ ಸುದ್ದಿ ಟಿವಿ ವರದಿಗಾರ ಮೌನೇಶ್ ಪೋತರಾಜು ಮೃತಪಟ್ಟಾಗ ಕಾರ್ಪೋರೇಷನ್ ವಾಹನದಲ್ಲಿ ವಾಹನದಲ್ಲಿ ಸಾಗಿಸಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಿರುವುದು ಮಾನವೀಯ ಮೌಲ್ಯಕ್ಕೆ ಧಕ್ಕೆ ತರುವಂತಾಗಿದೆ ಎಂದು ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ನಟರಾಜ್, ಬಡದಾಳ್ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



