ಡಿವಿಜಿ ಸುದ್ದಿ, ದಾವಣಗೆರೆ: ಜೆಜೆಎಂ ಮತ್ತು ಬಾಪೂಜಿ ಮೆಡಿಕಲ್ ಕಾಲೇಜಿನ ಗೃಹ ವೈದ್ಯರು 16 ತಿಂಗಳ ಶಿಷ್ಯ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಪ್ರತಿಭನಾ ಸ್ಥಳಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್, ಎಂಎಲ್ಸಿ ನಾರಾಯಣಸ್ವಾಮಿ ಭೇಟಿ ನೀಡಿ ಒಂದು ವಾರದಲ್ಲಿ ಶಿಷ್ಯ ವೇತನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ಆದರೆ, ವೈದ್ಯಕೀಯ ವಿದ್ಯಾರ್ಥಿಗಳು ಶಿಷ್ಯ ವೇತನ ನೀಡುವ ವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಎಬಿವಿಬಿ ಸಹಯೋಗದೊಂದಿಗೆ ಕಳೆದ ನಾಲ್ಕು ದಿನಗಳಿಂದ ಜಯದೇವ ಸರ್ಕಲ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂಸದರಾದ ಜಿ.ಎಂ.ಸಿದ್ದೇಶ್ವರ ಇವರು ಪ್ರತಿಭಟನಾನಿರತ ಕುರಿತು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ನೀವೆಲ್ಲ ಸೈನಿಕರಂತೆ ಹೋರಾಡಿದ್ದೀರಿ. ಇಂತಹ ಸಮಯದಲ್ಲಿ ನೀವು ಹೀಗೆ ಪ್ರತಿಭಟನೆ ಕೂರುವುದು ಸೂಕ್ತವಲ್ಲ. ನಮ್ಮ ಮೇಲೆ ನಂಬಿಕೆ ಇಟ್ಟು ಇಂದು ನಿಮ್ಮ ಪ್ರತಿಭಟನೆಯನ್ನು ವಾಪಸ್ಸು ಪಡೆದು ಕರ್ತವ್ಯಕ್ಕೆ ಮರಳಿರಿ. ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಮಗೆ ಬರಬೇಕಾದ ಸ್ಟೈಫಂಡ್ನ್ನು ಒಂದು ವಾರದಲ್ಲಿ ಕೊಡಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ರವರ ಜೊತೆ ಮಾತನಾಡಿದಾಗ ಸರ್ಕಾರದ ವತಿಯಿಂದ ನೀಡಿದರೆ ಆಡಿಟ್ ಆಕ್ಷೇಪಣೆಯಾಗುತ್ತದೆ ಆದ ಕಾರಣ ಸರ್ಕಾರದಿಂದ ನೀಡಲು ಬರುವುದಿಲ್ಲ. ಮೆಡಿಕಲ್ ಕಾಲೇಜು ಮ್ಯಾನೇಜ್ಮೆಂಟ್ನವರು ನೀಡಬೇಕು ಎಂದಿದ್ದಾರೆ. ಮ್ಯಾನೇಜ್ಮೆಂಟ್ನವರು ನಾವು ಕೊಡಲು ಬರುವುದಿಲ್ಲ. ಸರ್ಕಾರದಿಂದ ಭರಿಸಬೇಕೆಂದು ಹೇಳುತ್ತಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿ ಜೊತೆ ಕುಳಿತು ಸಭೆ ನಡೆಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಒಂದು ವಾರದಲ್ಲೇ ಹಣ ಬಿಡುಗಡೆ ಮಾಡಿಸಲಾಗುವುದು ಎಂದರು.

ವಿಧಾನ ಪರಿಷತ್ ಶಾಸಕರಾದ ನಾರಾಯಣಸ್ವಾಮಿ ಮಾತನಾಡಿ, ನನಗೆ ನಿಮ್ಮ ಸಮಸ್ಯೆ ಬಗ್ಗೆ ಅರಿವಿದೆ. ಆದ್ದರಿಂದಲೇ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದೇನೆ. ಈ ಸಮಸ್ಯೆ ಕುರಿತು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳ ಬಳಿ ಕುಳಿತು ಚರ್ಚಿಸಿ ಒಂದು ಪರಿಹಾರ ಕಂಡುಕೊಳ್ಳಲಾಗುವುದು. ಆದ ಕಾರಣ ಈಗಲೇ ನೀವು ಪ್ರತಿಭಟನೆಯನ್ನು ಹಿಂತೆಗೆದುಕೊಂಡು ಕರ್ತವ್ಯಕ್ಕೆ ವಾಪಸ್ಸಾಗಿರಿ ಎಂದುಮನವಿ ಮಾಡಿದರು.
ಪ್ರತಿಭಟನೆ ನಿರತ ಡಾ.ಹರೀಶ್ ಮಾತನಾಡಿ, 16 ತಿಂಗಳಿಂದ ನಮ್ಮನ್ನು ಕೇಳುವವರು ಇರಲಿಲ್ಲ. ಸ್ಟೈಫಂಡ್ ಇಲ್ಲದೇ ಬಹಳ ಕಷ್ಟಪಟ್ಟಿದ್ದೀವಿ. ಪ್ರತಿ ವರ್ಷ ಇದೇ ಸಮಸ್ಯೆ ಎದುರಾಗುತ್ತಿದೆ. ವೈದ್ಯಕೀಯ ಕಾಲೇಜಿನ ಮ್ಯಾನೇಜ್ಮೆಂಟ್ನವರು ಸರ್ಕಾರ ಸ್ಟೈಫಂಡ್ ನೀಡಬೇಕು ಎಂದರೆ, ಸರ್ಕಾರ ಮ್ಯಾನೇಜ್ಮೆಂಟ್ನವರೇ ನೀಡಬೇಕು ಎನ್ನುತ್ತಿದೆ. ಜಿಲ್ಲಾಧಿಕಾರಿಗಳು ಮೂರು ದಿನಗಳ ಕಾಲ ಸಮಯ ನೀಡಿ ಸಮಸ್ಯೆ ಬಗೆಹರಿಸುತೇವೆ ಎಂದಿದ್ದರು. ಆಗ ಪ್ರತಿಭಟನೆ ವಾಪಸ್ಸು ಪಡೆದಿದ್ದೆವು. ಆದರೆ ನಮ್ಮ ಸಮಸ್ಯೆಗೆ ಪರಿಹಾರ ದೊರಕಲಿಲ್ಲ. ಆದ ಕಾರಣ ಮತ್ತೆ ಧರಣಿ ನಡೆಸುತ್ತಿದ್ದೇವೆ. ನ್ಯಾಯ ಸಿಗುವವರೆಗೆ ನಾವು ಪ್ರತಿಭಟನೆ ಕೈಬಿಡುವುದಿಲ್ಲವೆಂದರು.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಇತರೆ ಅಧಿಕಾರಿಗಳು ಇದ್ದರು.



