ಡಿವಿಜಿ ಸುದ್ದಿ, ಉಚ್ಚಂಗಿದುರ್ಗ: ಅರಸೀಕೆರೆ ಬ್ಲಾಕ್ ನ 53 ಕೆರೆಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಕಳಪೆ ಆಗದಂತೆ ಯುವ ಜನತೆ ಎಚ್ಚರಿಕೆ ವಹಿಸಬೇಕು ಎಂದು ಭದ್ರಾ ಮೇಲ್ದಂಡೆ ಸಮಿತಿ ಸದಸ್ಯ ಕಲ್ಲೆರುದ್ರೇಶ್ ಕರೆ ನೀಡಿದರು.
ಸಮೀಪದ ಚಟ್ನಿಹಳ್ಳಿ ಗ್ರಾಮದಲ್ಲಿ ಅರಸೀಕೆರೆ ಬ್ಲಾಕ್ 53 ಕೆರೆ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕ್ಷೇತ್ರದ ಕೆರೆಗಳು ತುಂಬಿಸುವ ಯೋಜನೆಯನ್ನು ವಿಶೇಷ ತಜ್ಞರ ತಂಡವನ್ನು ಕರೆಯಿಸಿ, ತಾಂತ್ರಿಕ ಮಾಹಿತಿಯನ್ನು ಪಡೆದು ಕಳಪೆ ಕಾಮಗಾರಿ ನಡೆದಿರುವ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಈಗಾಗಲೇ ನಡೆದ ಪೈಪ್ ಲೈನ್ ಕಾಮಗಾರಿಯನ್ನು ಪರಿಶೀಲನೆ ನಡೆಸಿದಾಗ ಕಳಪೆ ಆಗಿರುವುದು ಕಂಡು ಬಂದಿದೆ. ಆಯಾ ವಲಯದ ಯುವ ಜನತೆ ಕಾಮಗಾರಿ ವೀಕ್ಷಣೆಯಲ್ಲಿ ತೊಡಗಿ ಜಾತಿ, ರಾಜಕೀಯ ಮರೆತು ಕಳಪೆ ಆಗುತ್ತಿರುವುದರ ವಿರುದ್ದ ಧ್ವನಿ ಎತ್ತಬೇಕು ಎಂದರು.
ಕಳಪೆ ಕಾಮಗಾರಿ ಕುರಿತು ನೀರಾವರಿ ಸಚಿವ ರಮೇಶ ಜಾರಕಿಹೊಳೆ ಅವರಿಗೆ ಜಗಳೂರು ಕ್ಷೇತ್ರ 22 ಕೆರೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡರೂ ಕೆರೆಗಳಿಗೆ ನೀರು ತಲುಪಿಲ್ಲ. ಈಗಾಗಲೇ ಸಾಕಾರಗೊಂಡಿದೆ ಎನ್ನುವ ವರದಿಗಳು ಹರಿದಾಡುತ್ತಿದೆ. ಆದರೆ ವಾಸ್ತವದಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಹೊರೆತು ಪಡಿಸಿದೆರೆ ಯಾವ ಕೆರೆಗಳಿಗೂ ನೀರು ತಲುಪಿಲ್ಲ. 53 ಕೆರೆ ಯೋಜನೆ ಕಾಮಗಾರಿಯಲ್ಲಿ ನಡೆಯುತ್ತಿರುವ ಲೋಪ ದೋಷಗಳನ್ನು ಸರಿ ಪಡಿಸಬೇಕು. ಕಾಮಗಾರಿ ಟೆಂಡರ್ ಆಗಿರುವವರನ್ನೇ 10 ವರ್ಷಗಳ ವರೆಗೆ ನಿರ್ವಹಣೆ ಜವಾಬ್ದಾರಿ ನೀಡಬೇಕು. ಗುಣಮಟ್ಟದ ಟ್ರೇಡ್ ಮಾರ್ಕ್ ಇರುವ ಪೈಪ್ ಗಳನ್ನು ಅಳವಡಿಸುವಂತೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಆನಂದಪ್ಪ, ರಮೇಶ, ಶಂಬಣ್ಣ, ಜಮ್ಮನಗೌಡ, ನಾಗರಾಜ, ಪ್ರಭುದೇವ, ದ್ವಾರಕೇಶನಾಯ್ಕ, ಹನುಮಂತ, ರಾಮಚಂದ್ರ, ಬಸವನಗೌಡ, ವಿಶ್ವನಾಥ, ರಾಜಶೇಖರ, ನಂದ್ಯಪ್ಪ, ಬಸವರಾಜ್ ಉಪಸ್ಥಿತರಿದ್ದರು.



